ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರು ಗ್ರಾಮದಲ್ಲಿ ಖಾಸಗಿ ಹಣಕಾಸು ಸಂಸ್ಥೆಯ ಕ್ರಮದಿಂದ ಮೂರು ತಿಂಗಳ ಹಸುಗೂಸು ಸೇರಿ ಐವರು ಕುಟುಂಬಸ್ಥರು ಬೀದಿಗೆ ಬಿದ್ದ ಘಟನೆ ನಡೆದಿದೆ.
ಚಿಕ್ಕೋಡಿಯ Equitas Small Finance Bank ವತಿಯಿಂದ ಸಾಲ ಮರುಪಾವತಿ ಬಾಕಿ ಇರುವ ಹಿನ್ನೆಲೆಯಲ್ಲಿ ಮನೆ ಸೀಜ್ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
20 ಲಕ್ಷ ರೂ. ಸಾಲ – 7 ಲಕ್ಷ ಬಾಕಿ
ಅಲಖನೂರಿನ ಹನುಮಂತ ಪಾಟೀಲ್ ತಮ್ಮ ತಂದೆ ಶ್ರೀಕಾಂತ್ ಪಾಟೀಲ್ ಅವರ ಹೃದಯ ಶಸ್ತ್ರಚಿಕಿತ್ಸೆಗಾಗಿ ಮನೆ ಅಡವಿಟ್ಟು ಸುಮಾರು 20 ಲಕ್ಷ ರೂ. ಸಾಲ ಪಡೆದಿದ್ದರು. ಕಳೆದ ವರ್ಷ ತಂದೆಯ ನಿಧನದ ಬಳಿಕ ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಹನುಮಂತ ಅವರ ಆರೋಗ್ಯ ಸಮಸ್ಯೆಯಿಂದ ಕಳೆದ ಏಳು ತಿಂಗಳಿಂದ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಹನುಮಂತ ದಂಪತಿಗೆ ಮೂರು ತಿಂಗಳ ಹಸುಗೂಸು ಸೇರಿದಂತೆ ಐವರು ಕುಟುಂಬಸ್ಥರು ರಾತ್ರಿಯಿಡೀ ಮನೆಯಿಂದ ಹೊರಗೆ ಕಾಲ ಕಳೆದಿದ್ದಾರೆ. ಚಳಿಯಿಂದ ಬಳಲಿದ ಮಗು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಪೊಲೀಸರಿಗೆ ಮನವಿ
ಘಟನೆ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕುಟುಂಬಕ್ಕೆ ಕಾಲಾವಕಾಶ ನೀಡುವಂತೆ ಮನವಿ ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ನಿಯಮಿತವಾಗಿ ಕಂತು ಪಾವತಿಸುತ್ತಿದ್ದೇನೆ. ಇತ್ತೀಚಿನ ಅನಾರೋಗ್ಯ ಕಾರಣದಿಂದ ವಿಳಂಬವಾಗಿದೆ ಎಂದು ಹನುಮಂತ ಹೇಳಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಆಸ್ತಿಯ ಆಸೆಗೆ ಪತಿಯ ಕೊಲೆ: ಪತ್ನಿ ಮತ್ತು ಮಗ ಸೇರಿ ಸಂಚು
ಘಟನೆ ಕುರಿತು ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮಾನವೀಯ ದೃಷ್ಟಿಯಿಂದ ಸಮಸ್ಯೆ ಬಗೆಹರಿಸಲು ಆಗ್ರಹ ಕೇಳಿಬರುತ್ತಿದೆ.





