ಬೆಳಗಾವಿ ಜಿಲ್ಲೆಯ ಮುಗಳಖೋಡ ಪಟ್ಟಣ ಸಮೀಪದ ಖಣದಾಳ ಗ್ರಾಮದ ಹುಲಿಕಾಂತೇಶ್ವರ ದೇವಸ್ಥಾನದ ಹುಂಡಿಯಲ್ಲಿ ವಿಚಿತ್ರ ಹರಕೆಯ ಚೀಟಿಯೊಂದು ಪತ್ತೆಯಾಗಿ ಗ್ರಾಮಸ್ಥರಲ್ಲಿ ಚರ್ಚೆಗೆ ಕಾರಣವಾಗಿದೆ.
ಫೆಬ್ರವರಿ 13ರಿಂದ 17ರವರೆಗೆ ಜರುಗಿದ ಹುಲಿಕಾಂತೇಶ್ವರ ಜಾತ್ರೆಯ ನಂತರ ದೇವಸ್ಥಾನ ಸಮಿತಿಯವರು ಹುಂಡಿ ಎಣಿಕೆ ನಡೆಸಿದರು. ಈ ವೇಳೆ ಬಿಳಿ ಹಾಳೆಯ ಮೇಲೆ ದೇವರೇ, ಮುಂದಿನ ಜಾತ್ರೆ ಬರುವಷ್ಟರಲ್ಲಿ ನನ್ನ ಅತ್ತೆ ಸಾಯಲಿ ಎಂದು ಬರೆಯಲಾಗಿದ್ದ ಚೀಟಿ ಸಿಕ್ಕಿದೆ. ಅದಕ್ಕೆ ₹100ರ ನೋಟನ್ನು ಅಂಟಿಸಿ ಹುಂಡಿಗೆ ಹಾಕಲಾಗಿತ್ತು.
ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಕೃಷ್ಣ ದಳವಾಯಿ ಮಾತನಾಡಿ, ಎರಡು ಚೀಟಿಗಳು ಸಿಕ್ಕಿವೆ. ಒಂದರಲ್ಲಿ ‘ದೇವರೆ ನನ್ನ ಕಷ್ಟಗಳನ್ನು ದೂರ ಮಾಡು’ ಎಂಬ ಬೇಡಿಕೆ ಇದೆ. ಇನ್ನೊಂದರಲ್ಲಿ ‘ಅತ್ತೆ ಸಾಯಲಿ’ ಎಂಬ ಬೇಡಿಕೆ ಇದೆ. ಇದನ್ನು ಯಾರು ಬರೆದಿದ್ದಾರೆ ಎಂಬುದು ಗೊತ್ತಿಲ್ಲ. ಇದೇ ಮೊದಲ ಬಾರಿಗೆ ಇಂತಹ ವಿಚಿತ್ರ ಮನಸ್ಥಿತಿಯ ಚೀಟಿ ಪತ್ತೆಯಾಗಿದೆ, ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಶಾಲೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಈ ಘಟನೆ ಗ್ರಾಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಭಕ್ತರು ಸದ್ಭಾವನೆಯ ಹರಕೆಗಳನ್ನು ಸಲ್ಲಿಸಬೇಕು ಎಂದು ದೇವಸ್ಥಾನ ಸಮಿತಿ ಮನವಿ ಮಾಡಿದೆ.




