ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಹೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ನಡೆದಿದೆ
ಬಗರನಾಳ ಗ್ರಾಮದ ನಿವಾಸಿ ಮಾರುತಿ ಅವಲಿ (25), ಮುಗಳಿಹಾಳ ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಹತ್ತಿ ಕಾಮಗಾರಿ ನಡೆಸುತ್ತಿದ್ದ ವೇಳೆ ಅಕಸ್ಮಾತ್ತಾಗಿ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುರ್ತಿನಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂಬುದು ಸ್ಥಳೀಯರ ಆರೋಪ.
ದುರ್ಘಟನೆ ನಂತರ ಮೂರು ಗಂಟೆಗಳ ಕಾಲ ಮೃತದೇಹ ವಿದ್ಯುತ್ ಕಂಬದ ಮೇಲೆ ಜೋತಾಡಿದ್ದರೂ, ಸಂಬಂಧಿತ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ತೋರಿದ್ದರಿಂದ ಗ್ರಾಮಸ್ಥರು ಕೋಪಗೊಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಒಬ್ಬ ಯುವ ಉದ್ಯೋಗಿ ಜೀವ ಹೋದರೂ ಅಧಿಕಾರಿಗಳಲ್ಲಿ ಮಾನವೀಯತೆ ಕಾಣಿಸುತ್ತಿಲ್ಲ,” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.





