ಪತ್ನಿಯ ಮೇಲಿನ ಸಂಶಯದಿಂದಲೇ ಪತಿಯೊಬ್ಬನು ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಪೋಲಿ ಗ್ರಾಮದಲ್ಲಿ ನಡೆದಿದೆ. ಪತ್ನಿಯ ಸಾವನ್ನು ಹೃದಯಾಘಾತ ಎಂದು ಬಿಂಬಿಸಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಕಿರಣಾ, ಆರೋಪಿಯನ್ನು ಪತಿ ಅವಿನಾಶ ಎಂದು ಗುರುತಿಸಲಾಗಿದೆ. ಕಳೆದ 12 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಇಬ್ಬರು ಸಣ್ಣ ಮಕ್ಕಳು ಇದ್ದಾರೆ. ಕಾಡಂಚಿನ ಗ್ರಾಮದಲ್ಲಿ ಪುಟ್ಟ ಕಿರಾಣಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು.
ಕಳೆದ ಕೆಲ ತಿಂಗಳಿಂದ ಪತಿಗೆ ಪತ್ನಿಯ ಮೇಲೆ ಅಸಂಬದ್ಧ ಸಂಶಯ ಕಾಡುತ್ತಿದ್ದು, ಇದೇ ಕಾರಣಕ್ಕೆ ನಿತ್ಯ ಜಗಳ ನಡೆಯುತ್ತಿತ್ತು. ಎರಡು ದಿನಗಳ ಹಿಂದೆ ಪತ್ನಿಯ ಮೇಲೆ ಹಲ್ಲೆ ನಡೆಸಿದರೂ ಕುಟುಂಬದ ಹಿರಿಯರು ಮಧ್ಯಸ್ಥಿಕೆ ವಹಿಸಿ ಸಮಾಧಾನಪಡಿಸಿದ್ದರು. ಆದರೆ ಮಧ್ಯರಾತ್ರಿ ಪತ್ನಿಯ ಮೇಲೆ ಮತ್ತೆ ತೀವ್ರ ಹಲ್ಲೆ ನಡೆಸಿದ್ದಾನೆ ವಿದ್ಯುತ್ ಶಾಕ್ ನೀಡಿದ್ದು, ಲಟ್ಟಣಿಗೆಯಿಂದ ಹೊಡೆದು ಎಸೆ ನೀಡಿದ್ದಾನೆ ಎನ್ನಲಾಗಿದೆ. ಪರಿಣಾಮವಾಗಿ ಕಿರಣಾ ಮೃತಪಟ್ಟಿದ್ದಾಳೆ.
ಘಟನೆ ಬಳಿಕ ಸಾವನ್ನು ಹೃದಯಾಘಾತ ಎಂದು ಬಿಂಬಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದಾನೆ. ಆದರೆ ಸ್ಥಳೀಯರ ಮಾಹಿತಿ ಮೇರೆಗೆ ನಂದಗಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಮೃತದೇಹವನ್ನು ಬೆಳಗಾವಿ ಬೀಮ್ಸ್ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಇದು ಕೊಲೆ ಎಂಬುದು ಪ್ರಾಥಮಿಕ ವರದಿಯಲ್ಲಿ ದೃಢವಾಗಿದೆ.
ವಿಚಾರಣೆ ವೇಳೆ ಆರೋಪಿಯು ಪತ್ನಿಯನ್ನು ಕೊಲೆಗೈದಿರುವುದನ್ನು ಒಪ್ಪಿಕೊಂಡಿದ್ದು, ಆತನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಗೋಡೆ ಮೇಲೆ ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ
ಈ ಘಟನೆಯಿಂದ ತಾಯಿ ಮೃತಪಟ್ಟಿದ್ದು, ತಂದೆ ಜೈಲಿಗೆ ಹೋಗಿರುವುದರಿಂದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮೃತಳ ಸಂಬಂಧಿಕರು ಒತ್ತಾಯಿಸಿದ್ದಾರೆ.




