ಪತ್ನಿಯನ್ನು ಕೊಲೆ ಮಾಡಿ ಶವವನ್ನು ಮಂಚದ ಕೆಳಗೆ ಅಡಗಿಸಿ ಪತಿ ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಾಮಲದಿನ್ನಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೊಲೆಯಾದ ಮಹಿಳೆ ಆಕಾಶ್ ಕುಂಬಾರ (20) ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಲೆಮಾಡಿ ಶವವನ್ನು ಮನೆಯಲ್ಲೇ ಮಂಚದ ಕೆಳಗೆ ಅಡಗಿಸಿದ ಆಕಾಶ್ ಕುಂಬಾರ ಪ್ರಸ್ತುತ ಪರಾರಿಯಾಗಿದ್ದಾನೆ.
ಮೂರು ದಿನಗಳ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸಂಬಂಧಿಕರ ಮನೆಯಿಂದ ವಾಪಸ್ ಬಂದ ಆಕಾಶ್ ತಾಯಿ ಬುಧವಾರ ಸಂಜೆ ಮನೆಯೊಳಗೆ ಪ್ರವೇಶಿಸಿದಾಗ ಶವ ಪತ್ತೆಯಾಗಿದೆ.
ಸುದ್ದಿ ತಿಳಿದಂತೆಯೇ ಮೂಡಲಗಿ ಪೊಲೀಸ್ ಠಾಣಾ ಸಿಬ್ಬಂದಿ, ಗೋಕಾಕ ಉಪವಿಭಾಗದ ಡಿವೈಎಸ್ಪಿ, ಹಾಗೂ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





