ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿ ಗ್ರಾಮದಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು ಕಿತ್ತೂರು ಪೊಲೀಸ್ ಠಾಣೆ ಪೊಲೀಸರು ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತ ವ್ಯಕ್ತಿಯನ್ನು ಕಶ ಕೋಟಿ (50) ಎಂದು ಗುರುತಿಸಲಾಗಿದೆ. ಆಸ್ತಿಗಾಗಿ ಪತ್ನಿಯೇ ಸಂಚು ರೂಪಿಸಿ ಪತಿಯನ್ನು ಕೊಲೆ ಮಾಡಿಸಿದ್ದೆಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಕಶ ಪತ್ನಿ ಕಸ್ತೂರಿ ಕೋಟಿ (42), ಪುತ್ರ ಕಿರಣ್ ಕೋಟಿ (25), ಮಲ್ಲೇಶ ಅಂಬಣ್ಣವರ (32) ಹಾಗೂ ಆತನ ಸ್ನೇಹಿತ ಮುದುಕಪ್ಪ ಕೊಳೇಕರ್ (30) ಬಂಧಿತರಾಗಿದ್ದಾರೆ.
ಮೆಕ್ಕೆಜೋಳದ ಗದ್ದೆಯಲ್ಲಿ ಶವ ಪತ್ತೆ
ಫೆಬ್ರವರಿ 20ರಂದು ಗ್ರಾಮದ ಹೊರವಲಯದ ಮೆಕ್ಕೆಜೋಳದ ಗದ್ದೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿತ್ತು. ಶವ ಭಯಾನಕ ಸ್ಥಿತಿಯಲ್ಲಿ ಇದ್ದುದರಿಂದ ಆರಂಭದಲ್ಲಿ ಗುರುತು ಪತ್ತೆಯಾಗಿರಲಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಶವದ ಗುರುತು ಪತ್ತೆಹಚ್ಚಿ ಆರೋಪಿಗಳ ತನಕ ತಲುಪಿದರು.
ಸಾಲ ಮರುಪಾವತಿ ಆಗದ ಹಿನ್ನೆಲೆ ಜಮೀನು ಬರೆದುಕೊಡಲು ಮಲ್ಲೇಶ ಒತ್ತಡ ಹಾಕುತ್ತಿದ್ದನು. ಹಣ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿ, ಜಾತ್ರೆಗೆ ಗ್ರಾಮಕ್ಕೆ ಬರುವ ಪತಿಯನ್ನು ಕೊಲೆ ಮಾಡಿದರೆ ಜಮೀನು ತನ್ನ ಹೆಸರಿಗೆ ಬರುತ್ತದೆ ಎಂದು ಕಸ್ತೂರಿ ಸಂಚು ರೂಪಿಸಿದ್ದಳು ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಪಾರ್ಟಿ ನೆಪದಲ್ಲಿ ಹತ್ಯೆ
ಫೆಬ್ರವರಿ 16ರಂದು ರಾತ್ರಿ “ಪಾರ್ಟಿ ಮಾಡೋಣ” ಎಂದು ನೆಪವಿಟ್ಟು ಮಲ್ಲೇಶ ಹಾಗೂ ಮುದುಕಪ್ಪ ಕಶನನ್ನು ಕರೆದುಕೊಂಡು ಹೋಗಿದ್ದಾರೆ. ಮಲ್ಲೇಶನ ಹೊಲದಲ್ಲಿ ಸಾರಾಯಿ ಕುಡಿಸಿ ಬಳಿಕ ಹಗ್ಗದಿಂದ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ.
ತಮ್ಮ ಜಮೀನಿನಲ್ಲಿ ಶವ ಬಿಟ್ಟರೆ ಅನುಮಾನ ಬರುತ್ತದೆ ಎಂದು ಬೇರೆಯವರ ಹೊಲದಲ್ಲಿ ಶವ ಎಸೆದು ಆರೋಪಿಗಳು ಪರಾರಿಯಾಗಿದ್ದರು.
ಈ ಸುದ್ದಿ ಓದಿದ್ದಿರಾ? ಬೆಳಗಾವಿ ಅಂಗನವಾಡಿ ಕೇಂದ್ರಗಳಲ್ಲಿ ಅವಧಿ ಮೀರಿದ ಪೌಷ್ಟಿಕ ಆಹಾರ ವಿತರಣೆ ಆರೋಪ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಿತ್ತೂರು ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ.




