ವಿಧಾನಸಭಾ ಚುನಾವಣೆಯಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಶಾಸಕ ಲಕ್ಷ್ಮಣ ಸವದಿ ಅವರ ಹೇಳಿಕೆಯ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಕಣ್ಣೀರಿಟ್ಟಿದ್ದಾರೆ.
ಅಥಣಿ ಕ್ಷೇತ್ರದ ಮೂಲ ಕಾಂಗ್ರೆಸ್ ಬಣದ ಪ್ರಭಾವಿ ನಾಯಕರಾದ ಮಂಗಸೂಳಿ, ಪಕ್ಷದ ಹೋರಾಟಗಳಲ್ಲಿ ಸಕ್ರಿಯರಾಗಿದ್ದು, 2023ರ ವಿಧಾನಸಭಾ ಚುನಾವಣೆಯ ವೇಳೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಇದ್ದರು. ಆದರೆ ರಾಜಕೀಯ ಬೆಳವಣಿಗೆಗಳ ನಂತರ ಟಿಕೆಟ್ ಶಾಸಕ ಲಕ್ಷ್ಮಣ ಸವದಿಗೆ ದೊರಕಿತ್ತು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದಾಗ, ಸಂಧಾನದ ಭಾಗವಾಗಿ ತಮಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಮಂಗಸೂಳಿ ನೆನಪಿಸಿಕೊಂಡರು. ಆದರೆ ಚುನಾವಣೆಯ ನಂತರ ಪಕ್ಷವು ತಮ್ಮನ್ನು ಕಡೆಗಣಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಹಣಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂಬುದು ನಿಜವಾದರೆ, ಲಕ್ಷ್ಮಣ ಸವದಿ ಅವರು ಸಿದ್ದೇಶ್ವರ ದೇವಾಲಯಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಗಜಾನನ ಮಂಗಸೂಳಿ ಸವಾಲು ಹಾಕಿದರು.
ತಮ್ಮ ಹೆಸರನ್ನು ಹಾಳು ಮಾಡಲು ಸವದಿ ಆರೋಪ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.





