ಲಿಂಗಾಯತ–ಪಂಚಮಸಾಲಿ ಹೋರಾಟ: ಡಿ.10ರಂದು ಸುವರ್ಣ ವಿಧಾನಸೌಧ ಸಮೀಪ ಮೌನ ಸತ್ಯಾಗ್ರಹ
ಬೆಳಗಾವಿ: ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನ ವೇಳೆ ಮೀಸಲಾತಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರಿಂದ ನಡೆದ ಹಲ್ಲೆ ಘಟನೆಯನ್ನು ಖಂಡಿಸಿ, ಡಿಸೆಂಬರ್ 10ರಂದು ಸುವರ್ಣ ವಿಧಾನಸೌಧ ಸಮೀಪ ಮೌನ ಸತ್ಯಾಗ್ರಹ ನಡೆಯಲಿದೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಶನಿವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಡಿ.10ರಂದು ಲಿಂಗಾಯತರ ಮೇಲಿನ ದೌರ್ಜನ್ಯ ದಿನ ಆಚರಿಸುತ್ತೇವೆ. ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು, ಗಾಂಧಿ ಭವನದಿಂದ ಮೌನ ಮೆರವಣಿಗೆ ನಡೆಸಿ ಸತ್ಯಾಗ್ರಹ ಮಾಡಲಾಗುತ್ತದೆ. ಸಾವಿರಾರು ಜನರು ಭಾಗವಹಿಸಲಿದ್ದಾರೆ” ಎಂದರು.
ಸ್ವಾಮೀಜಿ ಮುಂದುವರೆದು, “ಪಂಚಮಸಾಲಿ ಸಮುದಾಯದ ಎಲ್ಲ ಶಾಸಕರು ನಮ್ಮೊಂದಿಗಿದ್ದಾರೆ. ಅವರು ಯಾವ ಒತ್ತಡಕ್ಕೂ ಮಣಿದಿದ್ದರೂ, ಕನಿಷ್ಠ ನಮ್ಮ ಮೇಲಿನ ಹಲ್ಲೆ ಪ್ರಕರಣವನ್ನಾದರೂ ಸದನದಲ್ಲಿ ಖಂಡಿಸಬೇಕು” ಎಂದು ಸ್ಪಷ್ಟಪಡಿಸಿದರು.
“ನಾನು ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಮೀಸಲಾತಿ ಪತ್ರ ಸಿಕ್ಕುವವರೆಗೂ ನಮ್ಮ ಹೋರಾಟ ನ್ಯಾಯಯುತವಾಗಿ ಮುಂದುವರಿಯುತ್ತದೆ” ಎಂದು ಅವರು ಹೇಳಿದರು.





