ಬೆಳಗಾವಿ ಜಿಲ್ಲೆಯ ರಾಮದುರ್ಗ ಕ್ಷೇತ್ರದ ಶಾಸಕ ಅಶೋಕ ಪಟ್ಟಣ ಅವರ ಆಪ್ತ ಕಾರ್ಯಕರ್ತ ಹಾಗೂ ಪಿಕೆಪಿಎಸ್ ಮಾಜಿ ಅಧ್ಯಕ್ಷ ಗಿರಿಯಪ್ಪ ಗಂಟೋಟಿ (40) ಅವರ ಅಕಾಲಿಕ ನಿಧನದಿಂದ ರಾಜಕೀಯ ವಲಯದಲ್ಲಿ ಶೋಕದ ಅಲೆ ಎದ್ದಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ವಿಜಯೋತ್ಸವದ ಸಂಭ್ರಮಾಚರಣೆ ಬಳಿಕ ಗಿರಿಯಪ್ಪ ಗಂಟೋಟಿ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.
ಅಂತ್ಯಕ್ರಿಯೆ ವೇಳೆ ಶಾಸಕ ಅಶೋಕ ಪಟ್ಟಣ ಅವರು ಕಣ್ಣೀರನ್ನು ತಡೆಯಲಾಗದೆ ಭಾವುಕರಾದರು. ಪಾರ್ಥಿವ ದೇಹಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಶಾಸಕರ ಕಣ್ಣೀರಿನಿಂದ ಅಲ್ಲಿದ್ದ ಎಲ್ಲರೂ ಕಣ್ಣೀರಿಟ್ಟರು.
ಅಂತ್ಯಕ್ರಿಯೆಗೆ ನೂರಾರು ಜನರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಗ್ರಾಮಸ್ಥರು ಸೇರಿದ್ದರು.
ಗಿರಿಯಪ್ಪ ಗಂಟೋಟಿ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಶಾಸಕ ಪಟ್ಟಣ ಅವರ ಹೋರಾಟದ ಹಾದಿಯ ಸಹಯಾತ್ರಿಯಾಗಿದ್ದರು. ಅವರ ಅಕಾಲಿಕ ನಿಧನವು ರಾಮದುರ್ಗ ರಾಜಕೀಯ ವಲಯಕ್ಕೆ ಅಳಿಯದ ನಷ್ಟವೆಂದು ಶಾಸಕರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು.





