ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಮತ್ತು ವೆಂಕಟಾಪೂರ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಲವು ವರ್ಷಗಳಿಂದ ಎದುರಿಸುತ್ತಿರುವ ಸಾರಿಗೆ ತೊಂದರೆ ಮತ್ತೊಮ್ಮೆ ತೀವ್ರತೆ ಪಡೆದುಕೊಂಡಿದ್ದು, ರಾಮದುರ್ಗ KSRTC ಡಿಪೋದ ಎದುರು ದಿನಾಂಕ 20ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೂರು ದಿನಗಳ ಗಡುವನ್ನು ನೀಡಿದ್ದರು ಕಾರಣ, ನಾಳೆ ಬೆಳಿಗ್ಗೆ 7:30ಕ್ಕೆ ಹೆಚ್ಚುವರಿ ಬಸ್ ಬಿಡದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಸಾಲಾಪೂರ, ವೆಂಕಟಾಪೂರ, ದಾಡಿಬಾವಿ ಹಾಗೂ ಸುತ್ತಮುತ್ತಲಿನ ತಾಂಡಾಗಳಿಂದ ಪ್ರತಿದಿನ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಲೋಕಾಪೂರಕ್ಕೆ ಕಾಲೇಜು ಶಿಕ್ಷಣಕ್ಕಾಗಿ ತೆರಳುತ್ತಾರೆ. ಜೊತೆಗೆ ನೂರಾರು ಕೂಲಿ ಕಾರ್ಮಿಕರು ಸಹ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಬೆಳಿಗ್ಗೆ 8 ಗಂಟೆಗೆ ಇರುವ ಒಂದೇ KSRTC ಬಸ್ನಲ್ಲೇ ಎಲ್ಲಾ ಪ್ರಯಾಣಿಕರು ತೆರಳಬೇಕಾದ ಕಾರಣ, ದೈನಂದಿನ ಸಂಚಾರ ಸಂಕಷ್ಟವಾಗಿದೆ. ಬಸ್ನಲ್ಲಿ 150ಕ್ಕೂ ಹೆಚ್ಚು ಪ್ರಯಾಣಿಕರು ಕಿಕ್ಕಿರಿದು ಹೋಗುವುದು ಸಾಮಾನ್ಯವಾಗಿದ್ದು, ಹಲವಾರು ವಿದ್ಯಾರ್ಥಿಗಳು ಸ್ಥಳವಿಲ್ಲದೆ ಕಾಲೇಜಿಗೆ ಗೈರಾಗುವ ಪರಿಸ್ಥಿತಿ ಉಂಟಾಗಿದೆ.

ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿನಿ ಪವಿತ್ರಾ ಅವರು ಮಾತನಾಡುವಾಗ, ಬಸ್ ಸಮಸ್ಯೆಯನ್ನು ಕಳೆದ ಹಲವು ವರ್ಷಗಳಿಂದ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರವಾಗಿಲ್ಲವೆಂದು ಆರೋಪಿಸಿದರು. ಒಂದೇ ಬಸ್ನಲ್ಲಿ ನಿಂತುಕೊಂಡೇ ಪ್ರಯಾಣ ಮಾಡಬೇಕಾದ ಸ್ಥಿತಿ ಮುಂದುವರಿದಿದೆ. ಬಸ್ ಸಮಯಕ್ಕೆ ಬರುವುದಿಲ್ಲ ಮತ್ತು ಕೆಲವೊಮ್ಮೆ ಬಂದೇ ಬರುವುದಿಲ್ಲ. ವಿದ್ಯಾರ್ಥಿಗಳು ಸಮಸ್ಯೆ ತಿಳಿಸಿದಾಗ KSRTC ಸಿಬ್ಬಂದಿ ಪ್ರತಿಕ್ರಿಯಿಸುವ ಬದಲು ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಿ ಹೆದರಿಕೆ ಹುಟ್ಟಿಸುವ ಪ್ರಯತ್ನ ಮಾಡುತ್ತಾರೆ ಎಂದು ಅವರು ಹೇಳಿದರು. ನಮ್ಮ ಊರಿಗೆ ಬೆಳಿಗ್ಗೆ 7:30ಕ್ಕೆ ಹೆಚ್ಚುವರಿ ಬಸ್ ನೀಡದಿದ್ದರೆ ತೀವ್ರ ಮಟ್ಟದ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿದ್ದರು.
ವಿದ್ಯಾರ್ಥಿನಿ ಲಕ್ಷ್ಮೀ ಮಾತನಾಡುವಾಗ, ವೆಂಕಟಾಪೂರ ಚಿಕ್ಕ ಹಳ್ಳಿ ಎನ್ನುವುದರಿಂದ ಕೆಲಬಾರಿ ಬಸ್ ನಿಲುತ್ತಲೇ ಹೋಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಕ್ರಾಸ್ನಿಂದ ನಡೆದುಕೊಂಡು ಊರಿಗೆ ಬರಬೇಕಾಗುತ್ತದೆ. ಯಾವುದೇ ಬಸ್ ಸಮಯಕ್ಕೆ ಬರುವುದಿಲ್ಲ ಮತ್ತು ಅಧಿಕಾರಿಗಳ ಉತ್ತರ ಉಡಾಫೆಯಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಸಾರಿಗೆ ಇಲಾಖೆಯ ಕೆಲಸದ ಶೈಲಿಗೂ ಗಂಭೀರ ಟೀಕೆ ಮಾಡಿದ್ದರು. ಡಿಪೋಗೆ ಮನವಿ ಸಲ್ಲಿಸಲು ಬಂದಾಗ “ನಾಳೆ ಮಾಡ್ತೀವಿ”, “ಮೂರು ದಿನ ಬಿಡಿ”, “ಮ್ಯಾನೇಜರ್ ಇಲ್ಲ” ಎಂಬ ರೀತಿಯ ಉತ್ತರ ಮಾತ್ರ ಸಿಗುತ್ತದೆ. ವಿದ್ಯಾರ್ಥಿಗಳು ಹಸಿದ ಹೊಟ್ಟೆಯಲ್ಲಿ ದೂರದ ಊರುಗಳಿಂದ ಬಂದು ಮನವಿ ಸಲ್ಲಿಸಿದರೂ ಮಾನವೀಯ ಸ್ಪಂದನೆ ಕಾಣಿಸದೇ ಇರುವುದನ್ನು ಗ್ರಾಮಸ್ಥರು ಟೀಕಿಸಿದ್ದರು.

ಈ ಕುರಿತು ಈದಿನ.ಕಾಮ್ ರಾಮದುರ್ಗ KSRTC ಡಿಪೋ ಮ್ಯಾನೇಜರ್ ಅವರನ್ನು ಸಂಪರ್ಕಿಸಿದಾಗ, ಡಿಪೋದಲ್ಲಿ ಒಟ್ಟು 106 ಬಸ್ಗಳು ಮಾತ್ರ ಇರುವುದರಿಂದ ಹೊಸ ಮಾರ್ಗಗಳಿಗೆ ಅಥವಾ ಹೆಚ್ಚುವರಿ ಪ್ರಯಾಣಗಳಿಗೆ ಬಸ್ಗಳನ್ನು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಶಾಸಕರಾದ ಅಶೋಕ ಪಟ್ಟಣ ಅವರಿಗೆ ಹೊಸ ಬಸ್ಗಳನ್ನು ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಬಸ್ಗಳನ್ನು ಮಂಜೂರು ಮಾಡಲಾಗಿಲ್ಲ ಎಂಬುದನ್ನು ಮ್ಯಾನೇಜರ್ ತಿಳಿಸಿದ್ದಾರೆ.
ಸಾಲಾಪೂರ ಮತ್ತು ವೆಂಕಟಾಪೂರ ಹಾಗೂ ದಾಡಿಬಾವಿ, ಸುತ್ತಮುತ್ತಲಿನ ತಾಂಡಾಗಳಲ್ಲೂ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ದೈನಂದಿನ ಸಂಚಾರ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಈ ಕುರಿತು ಶಾಸಕ ಅಶೋಕ ಪಟ್ಟಣ ಹಾಗೂ ಸಾರಿಗೆ ಇಲಾಖೆಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರ ಧ್ವನಿಯನ್ನು ಯಾರೂ ಕೇಳದ ಕಾರಣ, ನಾಳೆ ಬಸ್ ಬರದಿದ್ದರೆ ಹೋರಾಟ ಮಾತ್ರವೇ ಉಳಿದಿದೆ ಎಂದು ಅವರು ಹೇಳಿದ್ದಾರೆ.
ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರತಿಭಟನೆಯ ಸಮಯದಲ್ಲಿ ವಿದ್ಯಾರ್ಥಿಗಳ ಬೇಡಿಕೆಗೆ ಮೂವರು ದಿನಗಳ ಗಡುವು ಕೇಳಿದ್ದರು. ನಾಳೆ ಹೆಚ್ಚುವರಿ ಬಸ್ ಬಿಡದಿದ್ದರೆ KSRTC ಡಿಪೋ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.





