ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಬೆಳಗಾವಿ ಜಿಲ್ಲಾ ಪೋಕ್ಸೊ ನ್ಯಾಯಾಲಯ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ಸಂಕೇಶ್ವರದ ದರ್ಶನ್ ಭಗವಂತ ಹುಣಶ್ಯಾಳ ಶಿಕ್ಷೆಗೊಳಗಾದವ ಎನ್ನಲಾಗಿದೆ. ಬಾಲಕಿಯನ್ನು ಪ್ರೀತಿಸಿದ್ದ ಈತ, 2024ರ ಆಗಸ್ಟ್ 25ರಂದು ಅಪ್ರಾಪ್ತೆ ಕಾಲೇಜು ಮುಗಿಸಿ ಮನೆಗೆ ಮರಳುವ ವೇಳೆ ನಿಡಸೋಸಿ ರಸ್ತೆಯಲ್ಲಿ ಆಕೆಯನ್ನು ತಡೆದು ಓಡಿಹೋಗುವ ಸಂಚು ರೂಪಿಸಿದ್ದ. ಆ.27ರ ರಾತ್ರಿ ಬಾಲಕಿಯನ್ನು ತನ್ನ ಬೈಕಿನಲ್ಲಿ ಕರೆದೊಯ್ದಿದ್ದ ಈತ ಅಥಣಿಯಲ್ಲಿ ತಾವಿಬ್ಬರೂ ದಂಪತಿ ಎಂದು ಹೇಳಿಕೊಂಡು ಮನೆ ಬಾಡಿಗೆ ಪಡೆದಿದ್ದ. ಬಾಲಕಿಗೆ ಮನಸಿಲ್ಲದಿದ್ದರೂ ಅತ್ಯಾಚಾರ ಎಸಗಿದ್ದ.
ಮಗಳು ಕಾಣೆಯಾದ ಬಗ್ಗೆ ಪಾಲಕರು ದೂರು ದಾಖಲಿಸಿದ್ದರು. ತನಿಖಾಧಿಕಾರಿ ಕೆ ಬಿ ಕಂಠಿ ಪ್ರಕರಣ ದಾಖಲಿಸಿದ್ದರು. ಸಂಕೇಶ್ವರ ಇನ್ಸ್ಪೆಕ್ಟರ್ ಆರ್ ಎಸ್ ಖೋತ ಮತ್ತು ಎಸ್ ಎಂ ಆವೂಜಿ ಪೋಕ್ಸೊ ಪ್ರಕರಣದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಸಿ ಎಂ ಪುಷ್ಪಲತಾ ಅವರು 8 ಸಾಕ್ಷಿಗಳ ವಿಚಾರಣೆ, 50 ದಾಖಲೆಗಳು ಹಾಗೂ 6 ಮುದ್ದೆಮಾಲುಗಳ ಆಧಾರದ ಮೇಲೆ ತೀರ್ಪು ಪ್ರಕಟಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವರ್ಷದ ಮೊದಲ ಮಳೆ ಕಂಡ ಕೊಡಗು; ಕಾಫಿ ಬೆಳೆಗಾರರಲ್ಲಿ ಆತಂಕ!
ನೊಂದ ಬಾಲಕಿಗೆ ಬೆಳಗಾವಿ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ₹4 ಲಕ್ಷ ಪರಿಹಾರ ಪಡೆಯಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್ ವಿ ಪಾಟೀಲ ವಾದ ಮಂಡಿಸಿದರು.





