ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ದಾಖಲಾಗಿರುವ ಅವಹೇಳನ ಪ್ರಕರಣದ ಹಿನ್ನೆಲೆಯಲ್ಲಿ ಧ್ವನಿ ಪರೀಕ್ಷೆಗಾಗಿ (Voice Test) ತೆರಳಿದ್ದ ನಾಗರಿಕ ಹಕ್ಕು ನಿರ್ದೇಶನಾಲಯದ ಪೊಲೀಸರು ಕತ್ತಿಯವರು ಸಿಕ್ಕದೇ ಹಿಂದಿರುಗಿದ್ದಾರೆ.
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (DCC Bank) ಚುನಾವಣಾ ಫಲಿತಾಂಶದ ದಿನದಂದು ರಮೇಶ್ ಕತ್ತಿ ಅವರು ವಾಲ್ಮೀಕಿ ಸಮಾಜದ ಕುರಿತು ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆ ಮುಂದುವರಿಸುತ್ತಿರುವ ಪೊಲೀಸರು, ಇಂದು ಬೆಳಗ್ಗೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ರಮೇಶ್ ಕತ್ತಿ ಅವರ ನಿವಾಸಕ್ಕೆ ವಿಚಾರಣೆಗೆ ಆಗಮಿಸಿದ್ದರು.
ಆದರೆ ಕತ್ತಿ ಮನೆಯಲ್ಲಿ ಇಲ್ಲದೆ ಇದ್ದುದರಿಂದ, ಎಸ್ಪಿ ರವೀಂದ್ರ ಗಡಾದೆ ಅವರ ನೇತೃತ್ವದ ತಂಡ ಬರಿಗೈಯಲ್ಲಿ ವಾಪಸ್ಸು ತೆರಳಬೇಕಾಯಿತು. ಕತ್ತಿ ಅವರ ಕುಟುಂಬ ಸದಸ್ಯರು “ಅವರು ಮನೆಯಲ್ಲಿ ಇಲ್ಲ” ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಕುಟುಂಬಸ್ಥರ ಮೂಲಕ ರಮೇಶ್ ಕತ್ತಿ ವಿಚಾರಣೆಗೆ ಶೀಘ್ರದಲ್ಲೇ ಹಾಜರಾಗುವಂತೆ ತಿಳಿಸಿ ತೆರಳಿದ್ದಾರೆ. ಧ್ವನಿ ಪರೀಕ್ಷೆಗೆ ಕತ್ತಿ ಯಾವಾಗ ಹಾಜರಾಗುತ್ತಾರೆ ಎಂಬುದರ ಕುರಿತು ಸ್ಪಷ್ಟತೆ ಇನ್ನೂ ಲಭ್ಯವಾಗಿಲ್ಲ.





