ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರಿಗೆ ಗೌರವ ನೀಡಬೇಕು. ಸಾರ್ವಜನಿಕರು ಬಂದ ಕೂಡಲೇ ಅವರನ್ನು ಕೂರಿಸಿ, ನಿಧಾನವಾಗಿ ಅವರ ಸಮಸ್ಯೆಗಳನ್ನು ಕೇಳಿಸಿಕೊಳ್ಳಬೇಕು. ಯಾವುದೇ ಹಂತದ ಪೊಲೀಸ್ ಸಿಬ್ಬಂದಿ(ಕಾನ್ಸ್ಟೆಬಲ್ನಿಂದ ಹಿಡಿದು ಅಧಿಕಾರಿಗಳವರೆಗೆ) ಸಾರ್ವಜನಿಕರ ಮೇಲೆ ಕೂಗಾಡುವುದು ಅಥವಾ ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಸಹಿಸುವುದಿಲ್ಲ ಎಂದು ಬೆಳಗಾವಿ ಎಸ್ಪಿ ಕೆ ರಾಮರಾಜನ್ ಕಟ್ಟುನಿಟ್ಟಾಗಿ ಹೇಳಿದರು.
ನೂತನವಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಥಣಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತನಾಡಿ, ”ಕಾನೂನು ರೀತಿಯಲ್ಲಿ ಬಂಧಿಸಬೇಕಿದ್ದರೆ ಬಂಧಿಸಿ. ಆದರೆ ತನಿಖೆಯು ಗುಣಮಟ್ಟದಿಂದ ಕೂಡಿರಬೇಕು. ಬೈಯುವುದು ಅಥವಾ ಬೆದರಿಸುವುದು ಇಲಾಖೆಯ ಕೆಲಸವಲ್ಲ” ಎಂದರು.
”ಯಾರಾದರೂ ಪೊಲೀಸರು ಅಥವಾ ಇತರ ಇಲಾಖೆಯವರು ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದರೆ, ತಕ್ಷಣ ದೂರು ನೀಡಲು ಅವಕಾಶವಿದೆ. ಇಲ್ಲಿ ನಿಮ್ಮ ಗೌರವ ಬಿಟ್ಟುಕೊಡುವ ಅಗತ್ಯವಿಲ್ಲ. ಠಾಣೆಯಲ್ಲಿ ದೂರು ಸ್ವೀಕರಿಸದಿದ್ದರೆ ಅಥವಾ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮೇಲಧಿಕಾರಿಗಳ ಕಚೇರಿಗೆ ಬಂದು ದೂರು ನೀಡಬಹುದು” ಎಂದು ಎಸ್ಪಿ ಸಲಹೆ ನೀಡಿದರು.
“ಅಥಣಿ ಭಾಗದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಒಂದು ವರ್ಷದಲ್ಲಿ 68 ಮಂದಿ ಮೃತಪಟ್ಟಿದ್ದಾರೆ. ಕುಡಿದು ವಾಹನ ಚಲಾಯಿಸಿ ಅಮಾಯಕರ ಸಾವಿಗೆ ಕಾರಣರಾದವರ ಮೇಲೆ ಕೊಲೆಗೆ ಸಮಾನವಾದ ಕಠಿಣ ಪ್ರಕರಣ ದಾಖಲಿಸಲಾಗುವುದು. ಅಪ್ರಾಪ್ತರು ವಾಹನ ಚಾಲನೆ ಮಾಡಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ” ಎಂದರು.
“ಗಾಂಜಾ ಸೇವನೆ ಪತ್ತೆ ಹಚ್ಚಲು ಆಧುನಿಕ ‘ಗಾಂಜಾ ಟೆಸ್ಟ್ ಕಿಟ್’ಗಳನ್ನು ಎಲ್ಲ ಠಾಣೆಗಳಿಗೂ ನೀಡಲಾಗುತ್ತಿದೆ. ಇದರಿಂದ ತಕ್ಷಣವೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಕೂಡಲೇ ದಾಳಿ ಮಾಡಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಅಕ್ರಮ ಬಾಂಗ್ಲಾ ವಲಸಿಗರ ಬಂಧನ: ಎರಡು ವರ್ಷಗಳ ಸಜೆ, ₹10,000 ದಂಡ ವಿಧಿಸಿ ನ್ಯಾಯಾಲಯ ಆದೇಶ
“ಮಟ್ಕಾ ದಂಧೆಯಲ್ಲಿ ಕೇವಲ ಸಣ್ಣಪುಟ್ಟ ವ್ಯಕ್ತಿಗಳಲ್ಲದೆ, ಇದರ ಹಿಂದೆ ಹಣ ಹೂಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಆನ್ಲೈನ್ನಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವ ಆಸೆಗೆ ಬಿದ್ದು, ಜನ ಸೈಬರ್ ಕ್ರೈಂಗೆ ಬಲಿಯಾಗುತ್ತಿದ್ದಾರೆ. ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ನಡೆಯುವ ವಂಚನೆಗಳ ಬಗ್ಗೆ ಜನರು ಲಾಜಿಕಲ್ ಆಗಿ ಯೋಚಿಸಿ, ಎಚ್ಚರದಿಂದ ಇರಬೇಕು” ಎಂದು ಎಸ್ಪಿ ತಿಳಿಸಿದರು.





