ನೈರುತ್ಯ ರೈಲ್ವೆ ವಲಯದ ಮಹಾ ಪ್ರಬಂಧಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಸೋಮವಾರ ಸಭೆ ನಡೆಸಿ, ತಮ್ಮ ಕ್ಷೇತ್ರದ ವಿವಿಧ ರೈಲ್ವೆ ಯೋಜನೆಗಳ ಪ್ರಗತಿ ಕುರಿತು ವಿವರವಾಗಿ ಮಾಹಿತಿ ಪಡೆದರು.
ಪ್ರಸ್ತಾಪಿತ ಬೆಳಗಾವಿ- ಕಿತ್ತೂರು -ಧಾರವಾಡ ನೂತನ ರೈಲು ಮಾರ್ಗದ ಕುರಿತು ಅಧಿಕಾರಿಗಳು, ಧಾರವಾಡ ಸಮೀಪ 16 ಎಕರೆ ಜಮೀನು ಹೊರತುಪಡಿಸಿ ಅಗತ್ಯವಿರುವ ಭೂ ಸಮೀಕ್ಷೆ ಪೂರ್ಣಗೊಂಡಿದೆ. ರಾಜ್ಯ ಸರ್ಕಾರದಿಂದ ಭೂಮಿ ಹಸ್ತಾಂತರವಾದ ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುತ್ತದೆ, ಎಂದು ತಿಳಿಸಿದ್ದಾರೆ. ಭೂಮಿ ಹಸ್ತಾಂತರದ ವಿಷಯದಲ್ಲಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಸಂಸದರು ಹೇಳಿದರು.
ಲೋಕಾಪುರ–ರಾಮದುರ್ಗ–ಸವದತ್ತಿ–ಧಾರವಾಡ ನೂತನ ರೈಲು ಮಾರ್ಗದ ಪೂರ್ವ ಸಮೀಕ್ಷೆ ಅನುಮೋದನೆಗಾಗಿ ರೈಲ್ವೆ ಮಂಡಳಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕೆಂದು ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ನಗರದಲ್ಲಿನ ಲೆವಲ್ ಕ್ರಾಸಿಂಗ್ 381 ಬಳಿ ಎರಡನೇ ಲೈನ್ ಕಾಮಗಾರಿ ಗತಿ ತುಂಬ ನಿಧಾನವಾಗಿದೆ ಎಂದು ಅವರು ಗಮನ ಸೆಳೆದರು. ವಾಹನ ಸಂಚಾರ ಮಾರ್ಗ ಬದಲಾವಣೆಗಾಗಿ ಅಗತ್ಯ ಪರವಾನಗಿಗಳನ್ನು ಪೊಲೀಸರಿಂದ ಪಡೆಯಲು ಸೂಚಿಸಿದ ಅವರು, ಸ್ಥಳನ್ನು ಭೇಟಿ ಮಾಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ರೈಲ್ವೆ ಮಹಾಪ್ರಬಂಧಕ ಮುಕುಲ್ ಸರನ್ ಮಾಥರ್ ಅವರಿಗೆ ತಿಳಿಸಿದರು.
ಅಮೃತ ಸ್ಟೇಶನ್ ಯೋಜನೆ ಅಡಿಯಲ್ಲಿ ಬೆಳಗಾವಿ ರೈಲು ನಿಲ್ದಾಣದ ಅಭಿವೃದ್ಧಿ ಆಮೆಗಳ ಹೆಜ್ಜೆಯಲ್ಲಿ ಸಾಗುತ್ತಿರುವುದನ್ನು ಸಂಸದರು ತೀವ್ರವಾಗಿ ಎತ್ತಿಹಿಡಿದರು. ಲಿಫ್ಟ್, ಎಲಿವೇಟರ್, ಫುಟ್ ಓವರ್ ಬ್ರಿಡ್ಜ್ ಸೇರಿದಂತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದರು. ಘಟಪ್ರಭಾ ನಿಲ್ದಾಣದ ಫುಟ್ ಓವರ್ ಬ್ರಿಡ್ಜ್ ಕಾಮಗಾರಿಯನ್ನೂ ವೇಗಗೊಳಿಸುವಂತೆ ಒತ್ತಾಯಿಸಿದರು.
ಇದೇ ವೇಳೆ ಬೆಳಗಾವಿ–ಮಣಗೂರ, ಬೆಳಗಾವಿ–ಮಡಗಾಂವ್–ಉಡುಪಿ–ಮಂಗಳೂರು, ಬೆಳಗಾವಿ–ಚೆನ್ನೈ (ತಿರುಪತಿ ಮಾರ್ಗವಾಗಿ) ಹೊಸ ರೈಲುಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಬೆಳಗಾವಿ–ಬೆಂಗಳೂರು ವಂದೇ ಭಾರತ ರೈಲು ಬೆಳಿಗ್ಗೆ 6 ಗಂಟೆಗೆ ಬೆಳಗಾವಿಯಿಂದಲೇ ಆರಂಭವಾಗುವಂತೆ ಹಾಗೂ ಹುಬ್ಬಳ್ಳಿ–ಬೆಳಗಾವಿ–ಪುಣೆ ವಂದೇ ಭಾರತ ರೈಲು ವಾರದ ಎಲ್ಲ ದಿನ ಸಂಚರಿಸುವಂತೆ ವ್ಯವಸ್ಥೆ ಮಾಡುವಂತೆ ಸಂಸದರು ಅಧಿಕಾರಿಗಳನ್ನು ಸೂಚಿಸಿದರು.





