ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಮಾಡುತ್ತಿರುವ ಆರೋಪಿತ ಮೋಸದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಸ್ವಾಮೀಜಿಗಳು ಮತ್ತು ರೈತ ಮುಖಂಡರು ಶನಿವಾರ ತೀರ್ಮಾನ ಕೈಗೊಂಡರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಹಲವು ಮುಖಂಡರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ,
“ಕಬ್ಬಿನ ತೂಕದಲ್ಲಿ ಸ್ವಾಮೀಜಿ ರೈತ ಎಂಬ ವ್ಯತ್ಯಾಸವಿಲ್ಲ. ನಾನು ಕಳಿಸಿದ ಕಬ್ಬಿಗೂ ತೂಕದಲ್ಲಿ ಹೊಡೆಯುತ್ತಾರೆ,” ಎಂದು ಆರೋಪಿಸಿದರು.
ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಪ್ರಶ್ನಿಸಿ,
“ಲಾರಿ ತೂಕದಲ್ಲಿ ಎರಡು ಟನ್ ಕಬ್ಬು ಹೊಡೆದು ₹200 ನೀಡಿದರೆ ರೈತರಿಗೆ ಏನು ಪ್ರಯೋಜನ?” ಎಂದು ಹೇಳಿದರು.
ರೈತ ನಾಯಕ ಇಂಗಳಗುಪ್ಪೆ ಕೃಷ್ಣಗೌಡ ಮಾತನಾಡಿ,
“ಸಮೀರವಾಡಿಯಲ್ಲಿ ಕಬ್ಬು ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿರುವುದು ರೈತರ ಕೆಲಸವಲ್ಲ. ಕಿಡಿಗೇಡಿಗಳು ಮಾಡಿದ ಕೃತ್ಯ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡ ಮೆಹಬೂಬ ನವಲಗುಂದ ಹೇಳಿದರು:
“ಕಬ್ಬಿನ ತೂಕದಲ್ಲಿ ಮಾತ್ರವಲ್ಲ, ಸೋಯಾಬೀನ್ ಮತ್ತು ಗೋವಿನಜೋಳದಲ್ಲಿಯೂ ಕ್ವಿಂಟಲ್ಗೆ ಆರು ಕೆ.ಜಿ ತೂಕದಲ್ಲಿ ಮೋಸ ನಡೆದಿದೆ. ವ್ಯಾಪಾರಸ್ಥರು–ಕಾರ್ಖಾನೆ ಮಾಲೀಕರಿಗೆ ಅನುಕೂಲವಾಗುವ ಕಾಯ್ದೆಯನ್ನು ಸರ್ಕಾರ ತಂದಿರುವುದರಿಂದ ರೈತರು ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಬೇಕು.”
ಸಭೆಯಲ್ಲಿ ನಿಂಗಪ್ಪ ತಡಕೋಡ, ಶಿವನಸಿಂಗ್ ಮೊಕಾಶಿ, ಬೀರಪ್ಪ ದೇಶನೂರ, ಬಸವರಾಜ ಮೊಕಾಶಿ, ಮಲ್ಲಿಕಾರ್ಜುನ ಕೊಡೊಳ್ಳಿ, ಎಂ.ಎಫ್. ಜಕಾತಿ, ಅಪ್ಪೇಶ ದಳವಾಯಿ, ನಾಗರತ್ನ ಪಾಟೀಲ, ಮಹಾದೇವಿ ಹುಯಿಲಗೋಳ, ರಘುನಾಥ ನಡುವಿನಮನಿ, ವಿಜಯಕುಮಾರ ಶಿಂಧೆ ಸೇರಿದಂತೆ ಅನೇಕ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಿತ್ತೂರು ಸುತ್ತಲಿನ ಹಳ್ಳಿಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.





