ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಂದೋಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದುರ್ಗಪ್ಪ ಟೋಪೊಜಿ ವಿರುದ್ಧ ಹಲ್ಲೆ ಆರೋಪ ದಾಖಲಾಗಿದ್ದರೂ ಅವರನ್ನು ಬಂಧಿಸದೇ, ಹಲ್ಲೆಗೊಳಗಾದ ವ್ಯಕ್ತಿಯನ್ನೇ ಪೊಲೀಸರು ಬಂಧಿಸಿರುವ ಘಟನೆ ಕಾನೂನು ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.
ನಾಲೈದು ದಿನಗಳ ಹಿಂದೆ ಗ್ರಾಮ ಸಮಸ್ಯೆ ಕುರಿತು ಮಾತನಾಡಲು ಬಂದ ಹನುಮಂತ ಕರಿಕಟ್ಟಿ ಎಂಬವರ ಮೇಲೆ ಗ್ರಾಪಂ ಅಧ್ಯಕ್ಷ ದುರ್ಗಪ್ಪ ಟೋಪೊಜಿ ಅವರು ಬೆನ್ನು ಕಚ್ಚಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 115(2) (ಗಾಯ ಉಂಟುಮಾಡುವ ಹಲ್ಲೆ), 352 (ಉದ್ದೇಶಪೂರ್ವಕ ಹಲ್ಲೆ) ಹಾಗೂ 506 (ಬೆದರಿಕೆ) ಅಡಿ ಅಪರಾಧಕ್ಕೆ ಒಳಪಡುವುದಾಗಿ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಹಲ್ಲೆಗೊಳಗಾದ ಹನುಮಂತ ಕರಿಕಟ್ಟಿ ನೀಡಿದ ದೂರುವನ್ನು ಪೊಲೀಸರು ಸ್ವೀಕರಿಸದೇ, ಆರೋಪಿಯಾದ ಗ್ರಾಪಂ ಅಧ್ಯಕ್ಷ ನೀಡಿದ ಪ್ರತಿದೂರುವನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದಲ್ಲದೇ, ಯಾವುದೇ ಅರೆಸ್ಟ್ ವಾರೆಂಟ್ ಇಲ್ಲದೇ ಸಂತ್ರಸ್ತನನ್ನೇ ಬಂಧಿಸಿರುವುದು ಸಂವಿಧಾನದ ಕಲಂ 21 (ವೈಯಕ್ತಿಕ ಸ್ವಾತಂತ್ರ್ಯ) ಉಲ್ಲಂಘನೆಯಾಗುತ್ತದೆ ಎಂಬ ಆರೋಪ ಕುಟುಂಬಸ್ಥರಿಂದ ಕೇಳಿಬಂದಿದೆ.
ಗ್ರಾಪಂ ಅಧ್ಯಕ್ಷ ದುರ್ಗಪ್ಪ ಟೋಪೊಜಿ ಅವರು ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ ಅವರ ಆಪ್ತ ಎಂಬ ಕಾರಣಕ್ಕೆ ಪೊಲೀಸರ ರಕ್ಷಣೆಯಿದೆ ಎಂಬ ಆರೋಪವೂ ಕೇಳಿಬಂದಿದೆ.
ಇದರಿಂದಾಗಿ ಪೊಲೀಸರ ನಿಷ್ಪಕ್ಷಪಾತ ತನಿಖೆ ಕುರಿತು ಸಂಶಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿವೆ.
ಈ ಸುದ್ದಿ ಓದಿದ್ದಿರಾ ? : ಬೆಳಗಾವಿ | ಯಲ್ಲಮ್ಮನ ಗುಡ್ಡದಿಂದ ಮರಳುತ್ತಿರುವಾಗ ಗುಂಡಿಗೆ ಬಿದ್ದ ಎತ್ತಿನ ಚಕ್ಕಡಿ
ಈ ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಹನುಮಂತ ಕರಿಕಟ್ಟಿ ಕುಟುಂಬಸ್ಥರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರನ್ನು ಭೇಟಿ ಮಾಡಿ, ಆರೋಪಿಯಾದ ಗ್ರಾಪಂ ಅಧ್ಯಕ್ಷನ ಬಂಧನ, ಸಂತ್ರಸ್ತನ ವಿರುದ್ಧದ ಪ್ರಕರಣ ಹಿಂಪಡೆ ಹಾಗೂ ಸ್ವತಂತ್ರ ತನಿಖೆ ನಡೆಸುವಂತೆ ಎಸ್ಪಿ ಕಚೇರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.




