ಬೆಳಗಾವಿ ತಾಲೂಕಿನ ಬಡಲಾ ಅಂಕಲಗಿ ಗ್ರಾಮದಲ್ಲಿ ಸೊಲಾರ್ ಪ್ಲಾಂಟ್ ನಿರ್ಮಾಣದ ಹೆಸರಿನಲ್ಲಿ ಗುಡ್ಡವನ್ನೇ ಅಗೆಯಲಾಗಿದ್ದು, ಸಾವಿರಾರು ಮರಗಳನ್ನು ಕಡಿತಗೊಳಿಸಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ.
ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಗುಡ್ಡ ಅಗೆಯುವ ಹಾಗೂ ಮರ ಕತ್ತರಿಸುವ ಕಾರ್ಯ ನಡೆಯುತ್ತಿದ್ದು, ಈವರೆಗೆ 40 ಎಕರೆಗೂ ಹೆಚ್ಚು ಪ್ರದೇಶ ಸಂಪೂರ್ಣ ಹಾನಿಗೊಳಗಾಗಿದೆ. ಈ ಬೆಳವಣಿಗೆ ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಂದಾಯ ಇಲಾಖೆಗೆ ಸೇರಿರುವ ಸರ್ವೇ ನಂ.359ರ ಗೈರಾಣು ಜಾಗದ 67 ಎಕರೆ ಪ್ರದೇಶದಲ್ಲಿ ಸೊಲಾರ್ ಪ್ಲಾಂಟ್ ನಿರ್ಮಾಣಕ್ಕೆ ತಹಶಿಲ್ದಾರ್ ಬಸವರಾಜ್ ನಾಗರಾಳ ಅವರು ಅನುಮತಿ ನೀಡಿರುವುದಾಗಿ ತಿಳಿದುಬಂದಿದೆ. ಪಿಎಂ ಕುಸುಮ್ ಫೀಡರ್ ಲೆವೆಲ್ ಸೊಲಾರೈಜೇಶನ್ ಯೋಜನೆಯಡಿ ಹೆಸ್ಕಾಂ ಹಾಗೂ ಇಂಧನ ಇಲಾಖೆಯ ಮೂಲಕ ಕಾಮಗಾರಿ ನಡೆಯುತ್ತಿದೆ.
ಆದರೆ ಈ ಪ್ರದೇಶದಲ್ಲಿ ಅರಣ್ಯ ಇರುವ ಕಾರಣ, ಅರಣ್ಯ ಇಲಾಖೆಯಿಂದ ಅನುಮತಿ ಪಡೆಯದೇ ಮರಗಳನ್ನು ಕಡಿತಗೊಳಿಸಿರುವ ಆರೋಪಗಳು ಕೇಳಿಬಂದಿವೆ. ಹೆಸ್ಕಾಂ ಇಲಾಖೆ ಎರಡು ತಿಂಗಳ ಹಿಂದೆ ಅನುಮತಿ ಕೋರಿ ಪತ್ರ ಬರೆದಿದ್ದರೂ, ಇದುವರೆಗೂ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ ಎನ್ನಲಾಗಿದೆ.
ಶ್ರೀಗಂಧ ಸೇರಿದಂತೆ ಅಮೂಲ್ಯ ಮರಗಳಿದ್ದ ಕಾಡನ್ನು ಯಾರ ಗಮನಕ್ಕೂ ಬರದಂತೆ ತರಾತುರಿಯಲ್ಲಿ ನಾಶ ಮಾಡಿರುವುದರ ಹಿಂದೆ ಯಾರು ಇದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಸದ್ಯ ಪ್ರಕರಣವನ್ನು ಬೆಳಗಾವಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಲಾಗಿದೆ.





