ಹರ್ಲಾಪೂರದಿಂದ ರಾಮಾಪೂರಕ್ಕೆ ಹೋಗುವ ರಸ್ತೆಯಲ್ಲಿ ನಡೆದಿದ್ದ ಯುವಕನ ಭಯಾನಕ ಹತ್ಯೆ ಪ್ರಕರಣವನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೃತ ವ್ಯಕ್ತಿಯನ್ನು ಧಾರವಾಡ ಜಿಲ್ಲೆಯ ಅಮ್ಮಿನಭಾಂವಿ ಗ್ರಾಮದ ಈರಪ್ಪ ಯಲ್ಲಪ್ಪ ಆಡಿನ ಎಂದು ಗುರುತಿಸಲಾಗಿದೆ. ಈತನ ಪತ್ನಿ ಕರೆವ್ವ ಕಮಲವ್ವ ಆಡಿನ, ಖಾನಪೇಟೆ ಗ್ರಾಮದ ಫಕೀರಪ್ಪ ಸೋಮಪ್ಪ ಕಣವಿ ಮತ್ತು ಸಾಬಣ್ಣ ಲಕ್ಷ್ಮಣ ಮಾದರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಅನೈತಿಕ ಸಂಬಂಧದ ಹಿನ್ನಲೆ:
ವಿಚಾರಣೆ ವೇಳೆ ಈರಪ್ಪನ ಪತ್ನಿ ಕರೆವ್ವ ಹಾಗೂ ಫಕೀರಪ್ಪ ನಡುವಿನ ಅನೈತಿಕ ಸಂಬಂಧ ಇದ್ದದ್ದು ಹಾಗೂ ಅವರ ಸಂಪರ್ಕಕ್ಕೆ ಪತಿ ಈರಪ್ಪ ಅಡ್ಡಿಯಾಗುತ್ತಿದ್ದದ್ದು ಗೊತ್ತಾಗಿದೆ. ಆಕ್ರೋಶದಿಂದ ಕೂಡಿದ ಮೂವರು ಸಂಚು ರೂಪಿಸಿ ಈರಪ್ಪನನ್ನು ಅಮ್ಮಿನಭಾಂವಿಯಿಂದ ಕರೆತಂದು, ಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಮೊದಲು ಟವೆಲ್ನಿಂದ ಉಸಿರುಗಟ್ಟಿಸಿ, ನಂತರ ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ : ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ : ಆರೋಪಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ
ಸಿಪಿಐ ವಿನಾಯಕ ಬಡಿಗೇರ ನೇತೃತ್ವದಲ್ಲಿ ಪಿಎಸ್ಐ ಸವಿತಾ ಮುನ್ಯಾಳ ಹಾಗೂ ಅವರ ತಂಡದಲ್ಲಿ ಎಎಸ್ಐ ಎಲ್.ಟಿ. ಪವಾರ, ವೈ.ಟಿ. ಕೋಟೀ, ಎಸ್.ಎಸ್. ಚೌದರಿ, ಎಸ್.ಎಂ. ಜಾಧವ, ವಿನೋದ ಟಕ್ಕನ್ನವರ, ಸಚಿನ್ ಪಾಟೀಲ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





