ಬೆಳಗಾವಿ ಜಿಲ್ಲೆಯಲ್ಲಿ ನಡೆದ ಚಿನ್ನದಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಮಲಪ್ರಭಾ ನದಿಯಲ್ಲಿ ಪತ್ತೆಯಾದ ಮೂರು ಬೈಕ್ಗಳು ಚಿನ್ನದಂಗಡಿ ದರೋಡೆಗೆ ಬಳಸಲಾಗಿದ್ದವು ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಒಂದೂವರೆ ತಿಂಗಳ ಹಿಂದೆ ಕಳ್ಳತನವಾಗಿದ್ದ ಮೂರು ಬೈಕ್ಗಳು ನದಿಯಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಡಿಸೆಂಬರ್ 22ರಂದು ಸವದತ್ತಿ ಪಟ್ಟಣದಲ್ಲಿ ಚಡ್ಡಿಗ್ಯಾಂಗ್ನಿಂದ ಚಿನ್ನದಂಗಡಿಯಲ್ಲಿ ಕಳ್ಳತನ ನಡೆದಿತ್ತು. ಸುಮಾರು 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಖದೀಮರು ಪರಾರಿಯಾಗಿದ್ದರು.
ಕಳ್ಳತನಕ್ಕೆ ಬಳಸಿದ ಬೈಕ್ಗಳನ್ನು ಗುರುತು ಸಿಗದಂತೆ ಮಾಡಲು ಆರೋಪಿಗಳು ನದಿಗೆ ಎಸೆದು ಹೋಗಿರುವುದು ಶಂಕಿಸಲಾಗಿದೆ. ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳರ ಚಲನವಲನ ಸೆರೆಯಾಗಿದ್ದು, ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.
ಈ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.




