ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಪದಮಂಡಿ ಗ್ರಾಮದಲ್ಲಿ ತಂದೆಯೊಂದಿಗೆ ಕುರಿ ಕಾಯಲು ತೆರಳಿದ್ದ ಇಬ್ಬರು ಬಾಲಕರು ಕಾಲುವೆಗೆ ಇಳಿದು ನೀರುಪಾಲಾದ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತಪಟ್ಟ ಬಾಲಕರನ್ನು ಹಣಮಂತ ದುರ್ಗಪ್ಪ ಹಗೇದ (10) ಹಾಗೂ ಬಸವರಾಜ ರಮೇಶ ಸೋಮಣ್ಣವರ (10) ಎಂದು ಗುರುತಿಸಲಾಗಿದೆ.
ತನ್ನ ತಂದೆ ಹಣಮಂತನೊಂದಿಗೆ ಕುರಿ ಕಾಯಲು ಹೋಗಿದ್ದ ವೇಳೆ, ಗೆಳೆಯ ಬಸವರಾಜನೊಂದಿಗೆ ಸಮೀಪದ ಕಾಲುವೆಗೆ ಈಜಲು ತೆರಳಿದ್ದರೆನ್ನಲಾಗಿದೆ.
ಕೆಲವು ಸಮಯವಾದರೂ ಮಕ್ಕಳು ಕಾಣಿಸದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ, ಕಾಲುವೆ ಬಳಿ ಬಾಲಕರ ಬಟ್ಟೆಗಳು ಪತ್ತೆಯಾಗಿದ್ದು, ನಂತರ ಇಬ್ಬರ ಮೃತದೇಹಗಳು ಕಾಲುವೆಯಲ್ಲಿ ದೊರೆತಿವೆ.
ಘಟನೆ ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.





