ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮ ಪಂಚಾಯತಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಕಾರ್ಯದರ್ಶಿ ಎಂ.ಡಿ. ಬಡಿಗೇರ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೋರಲಾದ ಮಾಹಿತಿಯನ್ನು ಸಮಯಕ್ಕೆ ಒದಗಿಸದ ಹಿನ್ನೆಲೆಯಲ್ಲಿ ರಾಜ್ಯ ಮಾಹಿತಿ ಆಯೋಗ, ಬೆಳಗಾವಿ ಪೀಠವು ಸುಮಾರು ₹20 ಸಾವಿರ ದಂಡ ವಿಧಿಸುವ ಆದೇಶ ಹೊರಡಿಸಿದೆ.
ಓಬಳಾಪುರ ಗ್ರಾಮದ ಮಾಹಿತಿ ಹಕ್ಕು ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರು ನೀಡಿದ ಅರ್ಜಿಗೆ ಸರಿಯಾದ ಉತ್ತರ ನೀಡದೇ ಇರುವುದರಿಂದ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ 25 ಜನವರಿ 2020 ರಂದು ನಡೆದ ವಿಚಾರಣೆಯಲ್ಲಿ ಮಾಹಿತಿ ಅಧಿಕಾರಿಯು:
ಕೋರಿದ ಮಾಹಿತಿಯನ್ನು ಒದಗಿಸದಿರುವುದು
ಆಯೋಗದ ವಿಚಾರಣೆಗೆ ಹಾಜರಾಗದೇ ಇರುವುದು
ಗೈರಾಗಲು ಯಾವುದೇ ಲಿಖಿತ ಸಮಜಾಯಿಷಿ ಸಲ್ಲಿಸದೇ ಇರುವುದು
ಇವೆಲ್ಲವನ್ನು ಆಯೋಗ ಗಂಭೀರ ನಿರ್ಲಕ್ಷ್ಯ ಎಂದೇ ಪರಿಗಣಿಸಿದೆ.
ಆಯೋಗವು ಮಾಹಿತಿ ಹಕ್ಕು ಕಾಯ್ದೆ 2005ರ ಕಲಂ 20(1) ಅಡಿಯಲ್ಲಿ ಕ್ರಮ ಜರುಗಿ, ಬಡಿಗೇರ ಅವರಿಗೆ ದಂಡ ವಿಧಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಅವರು ಓಬಳಾಪುರ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಹೊಸಕೇರಿ ಪಂಚಾಯತಿಯಲ್ಲಿ ಕಾರ್ಯದರ್ಶಿಗಳಾಗಿದ್ದಾರೆ.
ಮಾಹಿತಿ ಹಕ್ಕು ವಿಷಯಗಳಲ್ಲಿ ಅಧಿಕಾರಿಗಳ ಜವಾಬ್ದಾರಿ ಮತ್ತು ಪಾರದರ್ಶಕತೆಯ ಕೊರತೆಯನ್ನು ಈ ಘಟನೆ ಮತ್ತೆ ಹೊರಹಾಕಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.





