ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಖಚಿತವಾಗಿದ್ದು, ಅದು ಅಧಿವೇಶನದ ನಂತರ ಅಥವಾ ಮುಂಚಿತವಾಗಿ ನಡೆಯುವ ಸಾಧ್ಯತೆ ಇದೆ ಎಂದು ಶಾಸಕ ರಾಜು ಕಾಗೆ ತಿಳಿಸಿದ್ದಾರೆ.
“ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಶೀಘ್ರದಲ್ಲೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತೇನೆ,” ಎಂದು ಅವರು ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದ ಸಿದ್ದೇವಾಡಿ ಮತ್ತು ಮದಭಾವಿ ಗ್ರಾಮಗಳಲ್ಲಿ ರೂ.40 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಎರಡು ಸಮುದಾಯ ಭವನಗಳ ಭೂಮಿಪೂಜೆ ಬುಧವಾರ ನೆರವೇರಿಸಿ ಅವರು ಮಾತನಾಡಿದರು.
“ಸ್ವಾತಂತ್ರ್ಯದಿಂದ ಇಂದಿನವರೆಗೂ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಯ ವಿಷಯದಲ್ಲಿ ಅನ್ಯಾಯ ಆಗುತ್ತಲೇ ಬಂದಿದೆ. ಇದು ರಾಜಕೀಯದ ವಿಷಯವಲ್ಲ. ಯಾವ ಸರ್ಕಾರ ಬಂದರೂ ಅನುದಾನ, ಅಭಿವೃದ್ಧಿ ಹಾಗೂ ರಾಜಕೀಯ ಹಂಚಿಕೆಯಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ. ದಿವಂಗತ ಉಮೇಶ ಕತ್ತಿ ಅವರ ನಂತರ ನಾನು ಈ ಭಾಗದ ಹಿರಿಯ ನಾಯಕ. ಆದ್ದರಿಂದ ಪ್ರತ್ಯೇಕ ರಾಜ್ಯದ ಕೂಗು ಎತ್ತುವುದು ಆಶ್ಚರ್ಯಕರವೇನಲ್ಲ,” ಎಂದು ಕಾಗೆ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನಾಯಕ ಬಾಗಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಕೋರೆ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಿಜಗುಣಿ ಮಗದುಮ್ಮ, ಮುಖಂಡರಾದ ಅಶೋಕ ಪೂಜಾರಿ, ಕೆ.ಆರ್. ಪಾಟೀಲ, ಶಿವಾನಂದ ಮಗದುಮ್ಮ, ಸಂಜಯ ಅದಾಟೆ, ಶಿವಾನಂದ ಇಬ್ರಾಹಿಮಪುರ, ಸಿದರಾಯ ತೋಟಕರ, ರಾವಸಾಬ ಚೌಗಲಾ, ಅಶೋಕ ಸೂರ್ಯವಂಶಿ ಹಾಗೂ ಅಸ್ಲಂ ಮುಲ್ಲಾ ಉಪಸ್ಥಿತರಿದ್ದರು.





