ಬಾಗಲಕೋಟೆ ಜಿಲ್ಲೆಯ ಕೆಲವು ಉನ್ನತ ಅಧಿಕಾರಿಗಳು ಹೋಳಿ ಹಬ್ಬದ ಸಂಭ್ರಮದ ವೇಳೆ ಅಸಭ್ಯ ಹಾಗೂ ದ್ವಂದಾರ್ಥ ಗೀತೆಗಳಿಗೆ ನೃತ್ಯ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಮಾಜಿಕ ಹೋರಾಟಗಾರರಾದ ಶ್ರೀನಿವಾಸಗೌಡ ಪಾಟೀಲ ಅವರು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕರಿಗೆ ಈ ಕುರಿತು ಮನವಿ ನೀಡಿದ್ದಾರೆ.

ಮನವಿಯಲ್ಲಿ ತಿಳಿಸಿರುವಂತೆ, ಮಾರ್ಚ್ 8 ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ನಿವಾಸದ ಸಮೀಪ ಆಯೋಜಿಸಲಾದ ಹೋಳಿ ಸಂಭ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಸಿದ್ದಾರ್ಥ ಗೊಯಲ್, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರರ ಹಾಗೂ ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿಗಳು ಭಾಗವಹಿಸಿ ಅಸಭ್ಯ ಮತ್ತು ದ್ವಂದಾರ್ಥ ಪದಗಳಿರುವ ಗೀತೆಗಳಿಗೆ ನೃತ್ಯ ಮಾಡಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
“ಬಾಗಲಕೋಟ ಬಸ್ಟ್ಯಾಂಡನ್ಯಾಗ ನಿಂತಾಳ ಕಡಬಿಡಕಿ, ಕಾಲೇಜು ಮುಗಿಸಿ ಬರ್ತಾಳ ನನ್ನ ಹುಡಗಿ” ಸೇರಿದಂತೆ ಕೆಲ ಗೀತೆಗಳು ಕಾಲೇಜು ವಿದ್ಯಾರ್ಥಿನಿಯರ ಗೌರವಕ್ಕೆ ಧಕ್ಕೆ ತರುವಂತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಅಸಭ್ಯ ಗೀತೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳೇ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ಕರ್ತವ್ಯಲೋಪವಾಗಿದ್ದು ಖಂಡನೀಯ ಎಂದು ಪಾಟೀಲ ತಿಳಿಸಿದ್ದಾರೆ.
ಈ ಕುರಿತು ರಾಜ್ಯ ಡಿಜಿಪಿ, ಉತ್ತರ ವಲಯ ಐಜಿಪಿ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೂ ಮೊದಲು ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಸವದತ್ತಿ ಯಲ್ಲಮ್ಮನ ಗುಡ್ಡದ ಹುಂಡಿಯಲ್ಲಿ ₹97.49 ಲಕ್ಷ ಕಾಣಿಕೆ
ಆದ್ದರಿಂದ ಈ ಪ್ರಕರಣದಲ್ಲಿ ಭಾಗವಹಿಸಿದ ಅಧಿಕಾರಿಗಳು ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.




