ಈ ವರ್ಷದ ಚಳಿಗಾಲದ ಅಧಿವೇಶನವನ್ನು ಡಿಸೆಂಬರ 8ರಿಂದ ಬೆಳಗಾವಿಯಲ್ಲೇ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. “ಮುಂದಿನ ವಾರ ಬೆಳಗಾವಿ ಜಿಲ್ಲಾಧಿಕಾರಿಯವರೊಂದಿಗೆ ಸಭೆ ನಡೆಸಿ ಅಗತ್ಯ ಪೂರ್ವಸಿದ್ಧತೆಗಳ ಬಗ್ಗೆ ಚರ್ಚೆ ಮಾಡುತ್ತೇನೆ,” ಎಂದು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, “ಈ ಕುರಿತು ಮುಖ್ಯಮಂತ್ರಿ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ, ಅವರು ಸಹ ಒಪ್ಪಿಕೊಂಡಿದ್ದಾರೆ. ಆದರೆ ಶಾಸಕರುಗಳಲ್ಲಿ ಯಾವುದೇ ಗಂಭೀರತೆ ಕಾಣುತ್ತಿಲ್ಲ. ಉತ್ತರ ಕರ್ನಾಟಕದ ಶಾಸಕರು ತಮ್ಮ ಪ್ರದೇಶದ ಅಭಿವೃದ್ಧಿ ಕುರಿತು ಮಾತನಾಡುವುದಿಲ್ಲ, ಆದರೆ ದಕ್ಷಿಣ ಕರ್ನಾಟಕದವರು ಹೆಚ್ಚು ಮಾತನಾಡುತ್ತಾರೆ. ಅದಕ್ಕಾಗಿ ಪ್ರತಿ ಬುಧವಾರ ಮತ್ತು ಗುರುವಾರ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ಸಮಯವನ್ನು ಮೀಸಲಿಡಲಾಗಿದೆ,” ಎಂದು ಹೇಳಿದರು.
ರಾಜಕೀಯದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುವುದು, ದುಡ್ಡು ತಗೊಂಡು ಮತ ಹಾಕುವುದು — ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ. ಕಾಲ ಸುಧಾರಣೆ ಅಗತ್ಯ. ಆದರೆ ಪ್ರಶ್ನೆ ಕೇಳಿದ ಶಾಸಕರೇ ಒಂದು ನಿಮಿಷದಲ್ಲೇ ಹೊರಟು ಹೋಗುತ್ತಾರೆ,” ಎಂದು ವಿಷಾದಿಸಿದರು.
ಮುಖ್ಯಮಂತ್ರಿಗಳ ಬದಲಾವಣೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿ, ಹೊರಟ್ಟಿ ಹೇಳಿದರು: “ಅದು ನವೆಂಬರ್ ಕ್ರಾಂತಿಯೋ, ಡಿಸೆಂಬರ್ ಕ್ರಾಂತಿಯೋ ಗೊತ್ತಿಲ್ಲ. ಆದರೆ ಕ್ರಾಂತಿ ಮಾಡೋರು, ಕ್ರಾಂತಿ ಮಾಡಿಸಿಕೊಳ್ಳುವವರು ಇಬ್ಬರೂ ಅಲ್ಲೇ ಇದ್ದಾರೆ. ನಾವು ಕಣ್ಣಾರೆ ನೋಡಿಕೊಂಡು ಹೋಗುವುದು ಅಷ್ಟೇ. ದಿನನಿತ್ಯ ಮಾಧ್ಯಮಗಳಲ್ಲಿ ಅವರ ವಿಚಾರಗಳೇ ಕಾಣುತ್ತಿವೆ. ಆದರೆ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಜನರ ಪರ ಕೆಲಸ ಮಾಡುವ ಹೊಣೆಗಾರಿಕೆ ಎಲ್ಲರಿಗೂ ಇದೆ,” ಎಂದು ಹೇಳಿದರು.
ಮಾಜಿ ಸಂಸದ ಪ್ರತಾಪ ಸಿಂಹ ಹಾಗೂ ಶಾಸಕ ಪ್ರದೀಪ ಈಶ್ವರರ ನಿಂದನಾತ್ಮಕ ಹೇಳಿಕೆಗಳ ಕುರಿತು ಮಾತನಾಡಿದ ಹೊರಟ್ಟಿ, “ಮನುಷ್ಯತ್ವ ಇರುವವರು ಇಂತಹ ಮಾತುಗಳನ್ನಾಡುವುದಿಲ್ಲ. ಶಾಸಕರು ಮಾದರಿಯಾಗಬೇಕು. ಮಾತನಾಡುವ ಶೈಲಿಯಲ್ಲೂ ಸಂಸ್ಕಾರ ಇರಬೇಕು. ಸಮಾಜದಲ್ಲಿ ಒಳ್ಳೆಯದನ್ನು ಮಾಡುವ ಸೌಜನ್ಯತೆ ಕೆಲ ಶಾಸಕರಲ್ಲಿ ಕಾಣಿಸುತ್ತಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.





