ಕುರಿ ಹಿಂಡಿನ ಮೇಲೆ ಚಿರತೆ ರಾತ್ರಿ ದಾಳಿ ನಡೆಸಿ 27ಕ್ಕೂ ಹೆಚ್ಚು ಕುರಿಗಳು ಚಿರತೆ ದಾಳಿಗೆ ಬಲಿಯಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಚಿರತೆ ತನ್ನ ಆಹಾರಕ್ಕಾಗಿ ಮಾರಣಹೋಮ ನೆಡೆಸಿದೆ. ಘಟನೆಯು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹೊಳೆಸಿರಿಗೆರೆ ಕ್ರಾಸ್ ಬಳಿ ನಂದಿಗುಡಿ ರಸ್ತೆಯ ತೋಟವೊಂದರಲ್ಲಿ ಜರುಗಿದೆ.
ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಕ್ರಾಸ್ ಬಳಿಯ ಸ್ಥಳೀಯರೊಬ್ಬರ ಅಡಿಕೆ ತೋಟದಲ್ಲಿ ಬೀಡುಬಿಟ್ಟಿದ್ದ ಉತ್ತರ ಕರ್ನಾಟಕದಿಂದ ಆಹಾರಕ್ಕಾಗಿ ವಲಸೆ ಬಂದ ಕುರಿ ಹಿಂಡಿನ ಮೇಲೆ ಮಂಗಳವಾರ ತಡರಾತ್ರಿ ಚಿರತೆಯೊಂದು ದಾಳಿ ನಡೆಸಿದೆ. ದಾಳಿಯ ಪರಿಣಾಮವಾಗಿ 27 ಕುರಿ ತೀವ್ರ ಗಾಯಗೊಂಡು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಕುರಿಗಳು ಚಿಕ್ಕೋಡಿ ತಾಲ್ಲೂಕಿನ ಸದಲಗ ಗ್ರಾಮದ ಸೋಮಣ್ಣ ಅವರಿಗೆ ಸೇರಿದ್ದು. ಹೊಳೆಸಿರಿಗೆರೆ ಕ್ರಾಸ್ ಸಮೀಪದ ನಂದಿಗುಡಿ, ಯಲವಟ್ಟಿ ರಸ್ತೆಯ ತೋಟವೊಂದರಲ್ಲಿ ಕುರಿಗಳೊಂದಿಗೆ ಬೀಡುಬಿಟ್ಟಿದ್ದು, ತಡರಾತ್ರಿ ದಾಳಿಗೆ ಒಳಗಾಗಿವೆ. ಕುರಿಗಳು ಎಲ್ಲೆಂದರಲ್ಲಿ ಸತ್ತು ಬಿದ್ದಿವೆ. ಮಾಲೀಕರಿಗೆ 3-4 ಲಕ್ಷದಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಸ್ಥಳೀಯರೊಬ್ಬರು ಮಾಹಿತಿ ನೀಡಿ “ಶಿವಮೊಗ್ಗ, ಹೊನ್ನಾಳಿಗೆ ಹೋಗುವ ರಾಜ್ಯ ಹೆದ್ದಾರಿಯ ಮಲೆಬೆನ್ನೂರು ಬಳಿಯ ಬೆಟ್ಟ ಗುಡ್ಡಗಳ ಮಧ್ಯದಿಂದ ಚಿರತೆಗಳು ಆಹಾರಕ್ಕಾಗಿ ಅಡ್ಡಾಡುತ್ತವೆ. ಕೆಲವೊಮ್ಮೆ ರಸ್ತೆಯ ಬದಿಯಲ್ಲಿ ವಾಹನ ಸವಾರರಿಗೆ ಕಾಣಿಸಿಕೊಂಡ ಉದಾಹರಣೆಗಳಿವೆ. ಕುರಿ ಹಿಂಡಿನ ಜಾಡು ಹಿಡಿದು ಚಿರತೆ ದಾಳಿ ಮಾಡಿರಬಹುದು” ಎಂದು ಅಭಿಪ್ರಾಯಪಟ್ಟರು.

ಬಳ್ಳಾರಿ, ಬೆಳಗಾವಿ, ವಿಜಯಪುರ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಿಂದ ಪ್ರತಿ ವರ್ಷ ಕುರಿಗಾಹಿಗಳು ಹಿಂಡು ಹಿಂಡಾಗಿ ಕುರಿಗಳನ್ನು ಆಹಾರಕ್ಕಾಗಿ ವಲಸೆ ಕರೆದುಕೊಂಡು ಹೋಗುತ್ತಾರೆ. ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ನೀರಾವರಿ, ಮಲೆನಾಡಿನ ಪರಿಸರದಲ್ಲಿ ಕುರಿಗಳಿಗೆ ಆಹಾರಕ್ಕಾಗಿ ಬೇಕಾಗುವ ಮೇವು, ಹಸಿರು ಹುಲ್ಲುಗಾವಲು, ಮತ್ತು ನೀರಿನ ಮೂಲಗಳು ಸಾಕಷ್ಟು ಸಿಗುವುದರಿಂದ, ತೋಟಗಳಲ್ಲಿ ಹಸಿರು ಮೇವು ದೊರೆಯುವ ಈ ಭಾಗಗಳಲ್ಲಿ ಹೆಚ್ಚು ಹೆಚ್ಚಾಗಿ ತೋಟಗಳಲ್ಲಿ ಕುರಿ ಉಳಿಸಿಕೊಂಡು ಬೀಡು ಹಾಕುತ್ತಾರೆ. ಇದರಿಂದಾಗಿ ತೋಟಗಳಿಗೆ ಪಶುಗೊಬ್ಬರ ಕೂಡ ದೊರೆತಂತಾಗುತ್ತದೆ. ತೋಟದ ಮಾಲೀಕರು ಕೂಡ ಒಪ್ಪಂದದ ಮೂಲಕ ಅಲ್ಪಸ್ವಲ್ಪ ಹಣ ನೀಡುತ್ತಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ಆಹಾರದಲ್ಲಿ ಹುಳುಪತ್ತೆ: ಶಿಸ್ತು ಕ್ರಮಕ್ಕೆ ದಸಂಸ ಆಗ್ರಹ
ಚಿರತೆ ಕುರಿಗಳ ಮೇಲೆ ದಾಳಿ ನೆಡೆಸಿದ ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದೆ. ಅಲ್ಲದೇ ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.





