ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ,
ಹಿಂದು ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ – ನಮ್ಮ ರಾಷ್ಟ್ರಕವಿ ಕುವೆಂಪು ಬರೆದ ಸಾಲುಗಳು ನಮ್ಮ ರಾಜ್ಯದ ಐಕ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಆದರೆ, ರಾಜ್ಯದ ಅನೇಕ ಭಾಗಗಳಲ್ಲಿರುವ ಪ್ರಾದೇಶಿಕ ಅಸಮಾನತೆಯು ಉತ್ತರ ಕರ್ನಾಟಕದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ‘ಕಾವೇರಿ ಕಷ್ಟದಲ್ಲಿದ್ದಾಗ ನಮಗೆ ಆ ಕೂಗು ಕೇಳ್ತದ, ಆದ್ರೆ ಕೃಷ್ಣೆ, ಮಹದಾಯಿ ಹೋರಾಟದ ಕೂಗು ದಕ್ಷಿಣ ಕರ್ನಾಟಕಕ್ಕೆ ಯಾಕ ಕೇಳಲ್ಲ. ನಾವು ಮಲತಾಯಿ ಮಕ್ಕಳೆನು’ ಎಂದು ಕಾವೇರಿ ನದಿ ನೀರಿನ ಹೋರಾಟದ ಸಂದರ್ಭಗಳಲ್ಲಿ ಉತ್ತರ ಕರ್ನಾಟಕದ ಜನತೆ ದಕ್ಷಿಣದವರನ್ನ ಪ್ರಶ್ನೆ ಮಾಡುತ್ತಲೇ ಬಂದಿದ್ಧಾರೆ.
ಉತ್ತರ ಕರ್ನಾಟಕ ಭಾಗದ ಗಡಿ ಸಮಸ್ಯೆ, ಭಾಷಾ ಸಮಸ್ಯೆಗಳು, ನೀರಾವರಿ ಯೋಜನೆಗಳಿಗಿರುವ ಅನ್ಯ ರಾಜ್ಯಗಳ ತಕರಾರುಗಳು, ಬಡತನ, ನಿರುದ್ಯೋಗ, ಪ್ರವಾಹ, ಅಭಿವೃದ್ಧಿ ವಿಷಯಗಳು ಬಂದಾಗ ರಾಜಕಾರಣಿಗಳ ನಿರ್ಲಕ್ಷ್ಯ – ಇಂತಹ ಅನೇಕ ಸಮಸ್ಯೆಗಳ ಮಧ್ಯೆಯೇ ಜೀವನವನ್ನು ಕಟ್ಟಿಕೊಳ್ಳಲು ಒದ್ಧಾಡುವ ಇಲ್ಲಿನ ಜನರ ಸಮಸ್ಯೆಗಳಿಗೆ ನಿಜವಾದ ಕಾರಣ ಯಾರು? ದಕ್ಷಿಣ ಕರ್ನಾಟಕದ ಹೋರಾಟಗಾರರು ಇವರ ಜೊತೆ ನಿಲ್ಲದೇ ಇರುವುದಾ? ಅಥವಾ ಇವರನ್ನಾಳುವ ಜನಪ್ರತಿನಿಧಿಗಳಾ? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿರುವುದು ಇಂದಿನ ಸಂದರ್ಭದಲ್ಲಿ ಹೆಚ್ಚು ಅವಶ್ಯವಾಗಿದೆ.
ಕರ್ನಾಟಕದ ಹೋರಾಟಗಳಲ್ಲಿ ಉತ್ತರ ಕರ್ನಾಟಕದವರು ಅದೆಷ್ಟು ದೊಡ್ಡ ಮಟ್ಟದಲ್ಲಿ ಕೊಡುಗೆಗಳನ್ನು ನೀಡಿದ್ದಾರೆ ಎಂಬುದನ್ನು ಗಮನಿಸಿದಾಗ ಕರ್ನಾಟಕದ ಏಕೀಕರಣದ ಹೋರಾಟಕ್ಕೆ ಹೆಚ್ಚು ಮಹತ್ವ ಬರುವಂತೆ ಮಾಡಿದವರು ಉತ್ತರ ಕರ್ನಾಟದವರು. ಅಂದು 1953ರಲ್ಲಿ ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಕೆಪಿಸಿಸಿ ಸಭೆಗೆ ಕಾಂಗ್ರೆಸ್ ನಾಯಕರು ಬರುವುದನ್ನು ಅರಿತ ಜನರು, ಹಳ್ಳಿ-ಹಳ್ಳಿಗಳಿಂದ ಚಕ್ಕಡಿಗಳಲ್ಲಿ ಬಂದು ಹೋರಾಟಕ್ಕಿಳಿದರು. ಲಾಠಿ ಚಾರ್ಜ್, ಗೋಲೀಬಾರ್ಗೆ ಎದೆಯೊಡ್ಡಿ ಹೋರಾಟ ಮಾಡಿ ಕರ್ನಾಟಕದ ಕಾಂಗ್ರೆಸ್ ನಾಯಕರು ಅಂದಿನ ಪ್ರಧಾನಮಂತ್ರಿ ನೆಹರು ಅವರನ್ನು ಏಕೀಕರಣಕ್ಕೆ ಒತ್ತಾಯಿಸುವಂತೆ ಮಾಡಿದ್ದರು.
ರಾಜ್ಯದ ರೈತ ಹೋರಾಟಗಳಿಗೆ ಶಕ್ತಿ ಬಂದಿದ್ದು ಉತ್ತರ ಕರ್ನಾಟಕದ 1979-80ರಲ್ಲಿ ನರಗುಂದ, ನವಲಗುಂದಲ್ಲಿ ನಡೆದ ರೈತ ಬಂಡಾಯ. ಕರ್ನಾಟಕದ ಆಡಳಿತ ಭಾಷೆಯಲ್ಲಿ ಕನ್ನಡಕ್ಕೆ ಮೊದಲ ಆಧ್ಯತೆ ಸಿಗಬೇಕು ಎಂಬ ವರದಿಯನ್ನು ಸಿದ್ದಪಡಿಸಿದ್ದು ಉತ್ತರ ಕರ್ನಾಟಕದವರೇ ಆದ ಹಾವೇರಿಯ ವಿ.ಕೃ. ಗೋಕಾಕ ಅವರು. ಅವರ ವರದಿ 1980ರ ದಶಕದಲ್ಲಿ ಕರ್ನಾಟಕದ ವರ ನಟ ಡಾ. ರಾಜಕುಮಾರ್ ಬೆಂಗಳೂರಿನಿಂದ ಬೆಳಗಾವಿಯವರೆಗೆ ಗೋಕಾಕ ಚಳುವಳಿಯನ್ನು ಮಾಡುವಂತೆ ಮಾಡಿತ್ತು. ಹೀಗೆ ರಾಜ್ಯದ ನಾಡು ನುಡಿ ವಿಷಯ ಬಂದಾಗ ತಮ್ಮ ಪ್ರಾಣವನ್ನೇ ನೀಡಿದ ಉತ್ತರ ಕರ್ನಾಟಕದ ಜನತೆ ತಾವು ವರ್ಷಗಳ ಕಾಲ ಮಹದಾಯಿಗಾಗಿ ಹೋರಾಟ ನಡೆಸಿದರು. ಆದರೆ, ಈ ಹೋರಾಟಕ್ಕೆ ದಕ್ಷಿಣ ಕರ್ನಾಟಕದ ಜನರು ಕೈ ಜೋಡಿಸಲಿಲ್ಲ ಎನ್ನುವ ಕೊರಗು ಇಲ್ಲಿನ ಜನರಲ್ಲಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆದು ಕೊಡುವವರು ನಾವು, ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವುದು ನಾವೇ, ಅತಿ ಹೆಚ್ಚು ಬಾಕ್ಸೈಟ್ ಮತ್ತು ಕಬ್ಬಿಣದ ಅದಿರು ಸಿಗುವುದು ನಮ್ಮಲ್ಲಿಯೇ. ರಾಷ್ಟ್ರಧ್ವಜವನ್ನು ತಯಾರಿಸುವ ಖಾದಿ ಕೇಂದ್ರವೂ ನಮ್ಮಲ್ಲಿಯೇ ಇದೆ. ಕೃಷ್ಣೆ, ಗೋದಾವರಿ, ಭೀಮಾ, ಘಟಪ್ರಭಾ ನದಿಗಳು ಹರಿಯುವುದು ನಮ್ಮ ಭಾಗದಲ್ಲಿಯೇ. ಇಷ್ಟೆಲ್ಲ ಕನಿಜ ಮತ್ತು ಭೌಗೋಳಿಕ ಸಂಪತ್ತನ್ನು ಹೊಂದಿದ್ದರೂ ನಮ್ಮ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಮಾಡಾಕ ಯಾಕಾಗವಲ್ದು? ನಮ್ಮ ಉತ್ತರ ಕರ್ನಾಟಕದ ಬಗ್ಗೆ ಯಾಕೆ ನೀವು ಚರ್ಚೆ ಮಾಡಲ್ಲ? ಎಂದು ಉತ್ತರ ಕರ್ನಾಟಕ ಜನರು ಹೇಳುತ್ತಲೇ ಇದ್ದಾರೆ.
ಜನಪ್ರತಿನಿಧಿಗಳು ಬೆಳಗಾವಿ ಅಧಿವೇಶನದಲ್ಲಾದರೂ ನಮ್ಮ ಉತ್ತರ ಕರ್ನಾಕದ ಜನರ ಸಮಸ್ಯೆಗಳ ಬಗ್ಗೆ ಎಂದಾದ್ರೂ ಚರ್ಚೆ ಮಾಡಿದ್ದಿರಾ? ನಮ್ಮ ಮಕ್ಕಳು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಬೇಕಾ? ನಮ್ಮ ಬೆಳಗಾವಿ, ಹುಬ್ಬಳ್ಳಿ, ಧಾರವಾಡದಾಗ ಐಟಿ/ಬಿಟಿ ಕಂಪನಿಗಳು ಯಾಕಿಲ್ಲ? ಇಲ್ಲಿಯವರೆಗೂ ಉತ್ತರ ಕರ್ನಾಕದ ಬಡಪಾಯಿಗಳ ಈ ಪ್ರಶ್ನೆಗಳಿಗೆ ಇಲ್ಲಿನ ಜನಪ್ರತಿನಿಧಿಗಳೂ ಉತ್ತರಸಿದಿರುವುದು ವಿಪರ್ಯಾಸ.
ಉತ್ತರ ಕರ್ನಾಟಕದ ಜನರ ಆಸೆಗಳನ್ನು2022ರ ಬೆಳಗಾವಿ ಚಳಿಗಾಲದ ಅಧಿವೇಶನ ಕತ್ತು ಹಿಸುಕಿ ಕೊಂದಿತ್ತು. ಉತ್ತರ ಕರ್ನಾಟಕದ ಸಮಸ್ಯೆಗಳು ಚರ್ಚೆಗೆ ಬಾರದೆ, ಸಾವರ್ಕರ್ ಪೋಟೊ ವಿವಾದವೇ ಚರ್ಚೆಯ ವಿಷಯವಾಗಿತ್ತು. ಕೊನೆಗೆ ಡಿಸೆಂಬರ್ 30ರಂದು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಲಿದೆ ಎಂದುಕೊಂಡಿದ್ದರು. ಆದರೆ, ಅಂದು ಅಧಿವೇಶನದಲ್ಲಿ 225 ಶಾಸಕರಲ್ಲಿ ಕೇವಲ 30 ಜನ ಶಾಸಕರು ಮಾತ್ರ ಅಧಿವೇಶನಕ್ಕೆ ಹಾಜರಾಗಿದ್ದರು. ಅಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬರುವರೆಂಬ ಕಾರಣಕ್ಕೆ ಬಹಳಷ್ಟು ಶಾಸಕರು ಗೈರಾಗಿದ್ದರು. ಶಾಸಕರ ಸಂಖ್ಯೆಯ ಕೊರತೆಯ ಕಾರಣಕ್ಕೆ ಅಧಿವೇಶನದ ಕೊನೆಯ ದಿನವು ಉತ್ತರ ಕರ್ನಾಟಕದ ಸಮಸ್ಯೆಗಳು ಚರ್ಚೆ ಆಗಲೇ ಇಲ್ಲ.
ಈ ಸುದ್ದಿ ಓದಿದ್ದೀರಾ?: ಪ್ರಧಾನಿ ಮೋದಿ ಹೇಳಿದರೂ ಈ ಸಿನಿಮಾವನ್ನು ನೋಡುವವರೇ ಇಲ್ಲ!
ಹಿಂದಿನ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕರ್ನಾಟಕ ಭಾಗದವರೇ ಆಗಿದ್ದರು. ಆದರೂ, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಯಿತು. ಇದು ಬೊಮ್ಮಾಯಿ ಅವರು ದಕ್ಷಿಣದವರ ಕೈಗೊಂಬೆ ಎಂಬುದನ್ನು ಸ್ಪಷ್ಟಪಡಿಸಿತ್ತು. ಇಲ್ಲಿಯವರೆಗೆ ಉತ್ತರ ಕರ್ನಾಟಕದಿಂದ 8 ಜನ ಮುಖ್ಯಮಂತ್ರಿಗಳಾಗಿದ್ದಾರೆ. ಅವರು ಯಾರು ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲೇ ಇಲ್ಲ.
ನಮ್ಮ ಉತ್ತರ ಕರ್ನಾಟಕದ ಅನೇಕ ಶಾಸಕರುಗಳು ತಮಗೆಬೇಕಾದ ಸಚಿವ ಖಾತೆ ಸಿಗಲಿಲಿಲ್ಲ ಎಂಬ ಕಾರಣಕ್ಕೆ ರಾಜಿನಾಮೆ ಕೊಟ್ಟಿದ್ದಾರೆ. ಸುಭದ್ರ ಸರ್ಕಾವನ್ನೇ ಕೆಡವಿದ್ದಾರೆ. ಅವರೆಲ್ಲರೂ ತಮ್ಮ ಅಧಿಕಾರದಾಸೆಗಾಗಿ ರಾಜೀನಾಮೆ ಕೊಟ್ಟಿದ್ದಾರೆಯೇ ವಿನಃ, ಈ ಭಾಗದ ಸಮಸ್ಯೆಗಳ ಪರಿಹಾರಕ್ಕಾಗಿ ಯಾರೂ ರಾಜೀನಾಮೆ ಕೊಟ್ಟಿಲ್ಲ. ನಮ್ಮ ಕೃಷ್ಣೆಗೆ ಅನ್ಯಾಯವಾಗಿದೆ. ನಮ್ಮ ಮಹದಾಯಿ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ. ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೊದ ರೈತರ ಜೀವನಕ್ಕೆ ಪರಿಹಾರ ಸಿಕ್ಕಿಲ್ಲ. ಇಂತಹ ಅನೇಕ ವಿಷಯಗಳನ್ನು ಗಮನಿಸಿದಾಗ ಉತ್ತರ ಕರ್ನಾಕಟದವರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಬೇಕಿರುವುದು ದಕ್ಷಿಣದ ಹೋರಾಟಗಾರರ ಮೇಲೆ ಅಲ್ಲ. ಬದಲಿಗೆ ಉತ್ತರ ಕರ್ನಾಟಕದ ಸಮಯ ಸಾಧಕ ರಾಜಕಾರಣಿಗಳ ಮೇಲೆ ಆಕ್ರೋಶವನ್ನು ವ್ಯಕ್ತ ಪಡಿಸಬೇಕಿದೆ ಎಂಬುದು ಸ್ಪಷ್ಟವಾಗುತ್ತದೆ.
ಪ್ರಾದೇಶಿಕ ಅಸಮಾನತೆ ದೂರವಾದಾಗ ಮಾತ್ರ ರಾಜ್ಯ ಸಮಾನತೆ ಸಾಧಿಸಲು ಸಾಧ್ಯ. ‘ಯಥಾ ರಾಜ ತಥಾ ಪ್ರಜೆ’ ಎಂಬಂತೆ ಪ್ರಜೆಗಳು ಸಹ ರಾಜ್ಯದ ಒಂದು ಭಾಗದ ನೆಲ-ಜಲ ವಿಷಯದಲ್ಲಿ ಒಂದಾಗಿ ಹೋರಾಟ ಮಾಡಲಿ. ಮುಂದಿನ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಮಹಾದಾಯಿ, ಕೃಷ್ಣೆ, ಮಲಪ್ರಭೆಯ ಒಡಲಿನ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಲಿ ಪ್ರಾದೇಶಿಕ ಅಸಮಾನತೆ ಅಂತ್ಯವಾಗಬೇಕು ಎನ್ನುವದು ನಮ್ಮ ಆಶಯವಾಗಿದೆ.




