ಡಿ.ಕೆ. ಶಿವಕುಮಾರ್ ಬಳಿ ಶಾಸಕರ ಸಂಖ್ಯಾ ಬಲವೇ ಇರುವುದಿಲ್ಲ. ಮಾಧ್ಯಮಗಳಲ್ಲಿ ಕೇವಲ ಸುಳ್ಳು ವಿಷಯ ಸೃಷ್ಟಿಸುತ್ತಿದ್ದಾರೆ. ಅವರ ಹಿಂದೆ 50 ಶಾಸಕರಿದ್ದರೆ, ಇವತ್ತೇ ಅವರನ್ನು ಮುಖ್ಯಮಂತ್ರಿ ಮಾಡಲು ನಾನೇ ಒತ್ತಾಯಿಸುತ್ತೇನೆ, ಎಂದು ಶಾಸಕ ರಮೇಶ್ ಜಾರಕಿಹೊಳಿ ಟೀಕಿಸಿದರು.
ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸ್ಥಾನ ಕುರಿತ ವಿಚಾರದಲ್ಲಿ ಬಿಜೆಪಿ ತಟಸ್ಥವಾಗಿಯೇ ಇರುತ್ತದೆ. ಕಾಂಗ್ರೆಸ್ನ ಒಳ ಜಗಳವನ್ನು ನಾವು ಹೊತ್ತುಕೊಳ್ಳುವುದಿಲ್ಲ. ಅವರು ಎಷ್ಟೇ ಕಚ್ಚಾಡಿದರೂ ಅದು ಅವರ ಒಳಗಿನ ವಿಷಯ, ಎಂದು ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದ ಉದಾಹರಣೆಯನ್ನು ನೀಡಿದ ಅವರು, ಅಲ್ಲಿ ಆಡಳಿತ ಪಕ್ಷವೇ ವಿಭಜನೆಗೊಂಡು ಬಿಜೆಪಿ ಜೊತೆ ಸರ್ಕಾರ ಮಾಡಿತು. ಆದರೆ ಕರ್ನಾಟಕದಲ್ಲಿ ಅಂತಹ ಸ್ಥಿತಿಯೇ ಬರುವುದಿಲ್ಲ. ಇಲ್ಲಿ ಸಂಖ್ಯಾಬಲದಲ್ಲಿ ದೊಡ್ಡ ಅಂತರವಿದೆ. ಡಿ.ಕೆ. ಶಿವಕುಮಾರ್ ತಮ್ಮ ತಂಡದೊಂದಿಗೆ ಬಂದು ಬಿಜೆಪಿ ಸೇರಲು ಯತ್ನಿಸಿದರೂ, ನಾವು ಒಪ್ಪುವುದಿಲ್ಲ, ಎಂದು ಹೇಳಿದರು.





