ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ತೀವ್ರಗೊಂಡಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ಭಾಗಶಃ ಜಯ ಸಿಕ್ಕಿದೆ. ರೈತರು ಪ್ರತಿ ಟನ್ ಕಬ್ಬಿಗೆ ₹3,500 ನೀಡುವಂತೆ ಆಗ್ರಹಿಸುತ್ತಿದ್ದರೆ, ಸರ್ಕಾರ ಕಾರ್ಖಾನೆಗಳೊಂದಿಗೆ ನಡೆದ ಸಭೆಯ ಬಳಿಕ ₹3,300 ನಿಗದಿ ಮಾಡಿದೆ.
ಆದರೆ, ಚಿಕ್ಕೋಡಿ ತಾಲೂಕಿನ ಬೆಡಕಿಹಾಳದ ವೆಂಕಟೇಶ್ವರ ಪಾವರ್ ಪ್ರೊಜೆಕ್ಟ್ (ಸಕ್ಕರೆ ಕಾರ್ಖಾನೆ) ರೈತರ ಪರವಾಗಿ ನಿಂತು ಪ್ರತಿ ಟನ್ಗೆ ₹3,350 ನೀಡುವುದಾಗಿ ಪ್ರಕಟಿಸಿದೆ. ಕಾರ್ಖಾನೆಯ ವ್ಯವಸ್ಥಾಪಕ ಮಂಡಳಿಯು ಪ್ರಕಟಣೆಯಲ್ಲಿ ಹೇಳಿರುವಂತೆ,
“2025-26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗಾಗಿ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ₹3,300 ಹಾಗೂ ಕರ್ನಾಟಕ ಸರ್ಕಾರದ ಪಾಲು ₹50 ಸೇರಿ ಒಟ್ಟು ₹3,350 ನೀಡಲಾಗುವುದು,” ಎಂದು ತಿಳಿಸಿದೆ.

ಅದೇ ವೇಳೆ, ಕಾರ್ಖಾನೆಯು ತನ್ನ ಸದಸ್ಯರು ಹಾಗೂ ಕಬ್ಬು ಪೂರೈಕೆದಾರ ರೈತರಿಗೆ ಉತ್ತಮ ಗುಣಮಟ್ಟದ ಕಬ್ಬು ಪೂರೈಸುವಂತೆ ಕೋರಿದೆ.
ಮಹಾರಾಷ್ಟ್ರ ಮೂಲದ ಈ ಸಕ್ಕರೆ ಕಾರ್ಖಾನೆಯ ನಿರ್ಧಾರ ಸ್ಥಳೀಯ ರೈತರಲ್ಲಿ ಸಂತಸ ಮೂಡಿಸಿದೆ. ಆದರೆ ಇನ್ನೂ ಕೆಲವು ಕಾರ್ಖಾನೆಗಳು ₹3,300ಕ್ಕೂ ಒಪ್ಪದಿರುವುದರಿಂದ ರೈತರ ಅಸಮಾಧಾನ ಮುಂದುವರಿದಿದೆ.





