ಬೆಳಗಾವಿ ಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗರಾಜ ಕರೆಣ್ಣವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮಹೇಶ ಕುಮಠಳ್ಳಿ ನೀಡಿರುವ ಹೇಳಿಕೆಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಚಿದಾನಂದ ಸವದಿ, ಅಥಣಿಯಲ್ಲಿ ಕಾರ್ಯನಿರ್ವಹಿಸಿದ್ದ ಅಬಕಾರಿ ಇನ್ಸ್ಪೆಕ್ಟರ್ ಲಕ್ಷ್ಮಣ ಐಗಳಿ ಅವರ ಸಾವಿನ ಕುರಿತು ಮಹೇಶ ಕುಮಠಳ್ಳಿಯವರು ಸ್ಪಷ್ಟ ಉತ್ತರ ನೀಡಬೇಕು ಎಂದು ಸವಾಲು ಹಾಕಿದರು. “ಅಬಕಾರಿ ಇನ್ಸ್ಪೆಕ್ಟರ್ ಸಾವು ಹೇಗೆ ಆಯಿತು? ಅದು ಕೊಲೆಯೇ ಅಥವಾ ಬೇರೆ ಕಾರಣವೇ? ಈ ಬಗ್ಗೆ ನಾಳೆ ಸಂಜೆ ವೇಳೆಗೆ ಉತ್ತರ ಕೊಡಬೇಕು” ಎಂದು ಅವರು ಒತ್ತಾಯಿಸಿದರು.
ಮಹೇಶ ಕುಮಠಳ್ಳಿಯವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಆರೋಪಿಸಿದ ಅವರು, “ಕೊರೊನಾ ಸಮಯದಲ್ಲಿ ಮನೆಯ ಬಾಗಿಲು ಹಾಕಿಕೊಂಡು ‘ಯಾರಿಗೂ ಪ್ರವೇಶವಿಲ್ಲ’ ಎಂಬ ಬೋರ್ಡ್ ಹಾಕಿದ್ದವರು ಇಂದು ಸಾರ್ವಜನಿಕ ಜೀವನದ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕದ ಗಾದೆಯನ್ನು ಉಲ್ಲೇಖಿಸಿದ ಚಿದಾನಂದ ಸವದಿ, “ಕಬ್ಬಿಗೆ ಬೆಂಕಿ ಹತ್ತಿದಾಗ ಜೋಳ ಸುಟ್ಟಂತಾಗಿದೆ. ನಿಂಗರಾಜ ಕರೆಣ್ಣವರ ಮೇಲೆ ಹಲ್ಲೆ ನಡೆದ ಕೂಡಲೇ ಆಸ್ಪತ್ರೆಯಲ್ಲಿದ್ದರೂ, ಈಗ ರಾಜಕೀಯ ಲಾಭಕ್ಕಾಗಿ ಹೇಳಿಕೆಗಳನ್ನು ನೀಡಲಾಗುತ್ತಿದೆ” ಎಂದು ಟೀಕಿಸಿದರು.
ಅಥಣಿಯನ್ನು ಬಿಹಾರ ಆಗಲು ಬಿಡುವುದಿಲ್ಲ ಎಂದು ಚಿದಾನಂದ ಸವದಿ ಖಡಕ್ ಎಚ್ಚರಿಕೆ ನೀಡಿದರು.




