ಬೆಲ್ಲದ ಗಾಣ ಅಂದ್ರೆ ಕಬ್ಬಿನಿಂದ ಬೆಲ್ಲ ಮಾಡೋ ನಮ್ಮ ಹಳ್ಳಿಯ ಸಾಂಪ್ರದಾಯಿಕ ಕೈಗಾರಿಕೆ. ಒಂದು ಕಾಲದಲ್ಲಿ, ಉತ್ತರ ಕರ್ನಾಟಕ ಭಾಗದ ಹಳ್ಳಿಗಳಲ್ಲಿ ಬೆಲ್ಲದ ಗಾಣ ಪ್ರಾರಂಭ ಆದ್ರೆ ಕೆಲಸಕ್ಕಾಗಿ ಅಲೆದಾಡುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಗಾಣ ಹಚ್ಚಿದ್ರೆ ಸಾಕು ಅಲ್ಲಿ ದಿನಪೂರ್ತಿ ಕೆಲಸ, ಬೆಲ್ಲದ ಗಾಣಗಳು ಹಳ್ಳಿಯ ಜನರಿಗೆ ಆರ್ಥಿಕತೆಯ ಶಕ್ತಿ ಕೇಂದ್ರವೇ ಆಗಿದ್ದವು.
ರೈತರು ತಾವು ಬೆಳೆದ ಕಬ್ಬನ್ನೇ ಗಾಣಕ್ಕೆ ತರುತ್ತಿದ್ರು. ಮೊದಲು ಗಾಣದಲ್ಲಿ ಕಬ್ಬಿನ ರಸವನ್ನು ತೆಗೆದುಕೊಳ್ತಿದ್ರು. ಆ ರಸವನ್ನ ದೊಡ್ಡ ಕಬ್ಬಿಣದ ಬಾಣಲಿಗಳಲ್ಲಿ ಹಾಕಿ ಗಂಟೆಗಟ್ಟಲೆ ಕಾಯಿಸ್ತಿದ್ರು. ಕೆಳಗಡೆ ಕಟ್ಟಿಗಿ ಬೆಂಕಿ ಹೊತ್ತಿ ಉರಿಯುತ್ತಿರ್ತಿತ್ತು. ಒಬ್ಬರು ಬೆಲ್ಲದ ಪಾಕವನ್ನು ತಯಾರಿ ಮಾಡ್ತಿದ್ರು. ಹೀಗೆ ಕಲೆಹಾಕಿ, ಕಾಯಿಸಿ, ಸರಿಯಾದ ದಪ್ಪ ಬಂದ್ಮಲೆ ಆ ಪಾಕವನ್ನ ಅಚ್ಚುಗಳಲ್ಲಿ ಹಾಕ್ತಿದ್ರು. ಚಳಿ ಹಿಡಿದ್ಮೇಲೆ ಗಟ್ಟಿ ಬೆಲ್ಲದ ಪೆಂಟಿ ಸಿದ್ಧ ಆಗ್ತಿತ್ತು. ಆ ಬೆಲ್ಲವನ್ನು ಹತ್ತಿರದ ಮಾರುಕಟ್ಟೆಗೊಯ್ದು ಮಾರ್ತಿದ್ರು. ಇದರಿಂದ ಮಧ್ಯವರ್ತಿಯ ತೊಂದರೆ ಇರ್ತಿರಲಿಲ್ಲ ರೈತನಿಗೆ ನೇರವಾಗಿ ಹಣ ಸಿಗ್ತಿತ್ತು.
ಹಳ್ಳಿಗರಿಗೇ ಉದ್ಯೋಗ
ಗಾಣ ಅಂದ್ರೆ ರೈತನದ್ದೊಂದೇ ಅಲ್ಲ. ಅಲ್ಲಿ ಹಲವರ ಹೊಟ್ಟೆಗೂ ಅನ್ನ ಸಿಗ್ತಿತ್ತು. ಒಬ್ಬನು ಕಬ್ಬು ತರುತ್ತಾನೆ, ಇನ್ನೊಬ್ಬನು ಕಬ್ಬಿನ ರಸ ತೆಗೆಸ್ತಾನೆ, ಮತ್ತೊಬ್ಬನು ಪಾಕ ತಯಾರಿಸ್ತಾನೆ, ಇನ್ನೊಬ್ಬನು ಅಚ್ಚು ಹಾಕ್ತಾನೆ. ಹೆಂಗಸರೂ ಕೂಡ ಸಣ್ಣಪುಟ್ಟ ಕೆಲಸಗಳಲ್ಲಿ ಕೈಜೋಡಿಸ್ತಿದ್ರು. ಹೀಗೆ ಬೆಲ್ಲದ ಗಾಣ, ಕೂಲಿ ಆಳುಗಳ ಒಗ್ಗಟ್ಟಿನ ಸ್ಥಳವಾಗಿತ್ತು.
ಗಾಣದಲ್ಲಿ ಮಾಡ್ತಿರೋ ಬೆಲ್ಲಕ್ಕೆ ರಾಸಾಯನಿಕ ಏನೂ ಇರ್ತಿಲಿರಲ್ಲ. ಶುದ್ಧ ಕಬ್ಬಿನ ರಸ, ಹಳ್ಳಿಯ ಜನರ ಪರಿಶ್ರಮದಿಂದ ಬೆಲ್ಲವು ಶುದ್ದವಾಗಿರುತ್ತಿತ್ತು. ಆ ಬೆಲ್ಲದ ರುಚಿ ಪ್ರಸ್ತುತ ಕಾರ್ಖಾನೆಗಳಲ್ಲಿ ತಯಾರಾಗುವ ಬೆಲ್ಲಕ್ಕೆ ಸಿಗೋದಿಲ್ಲ ಅಂತ ಹಿರಿಯರು ಹೇಳ್ತಿರ್ತಾರೆ. ಅಂದು ತಯಾರಾದ ಬೆಲ್ಲವನ್ನು ಚಹಾಕ್ಕೆ ಹಾಕಿದ್ರೆ ಸುವಾಸನೆಯೇ ಬೇರೆ ಇರ್ತಿತ್ತು, ಆ ಬೆಲ್ಲದ ರುಚಿ ಹಾಗೇ ಇರ್ತಿತ್ತು.
ಕಾರ್ಖಾನೆಗಳ ಹೊಡೆತ
ಆದ್ರೆ ಕಾಲ ಬದ್ಲಾಯ್ತು. ದೊಡ್ಡ ಸಕ್ಕರೆ ಕಾರ್ಖಾನೆಗಳು ಬಂದ್ಮೇಲೆ ರೈತರು ಕಬ್ಬನ್ನ ನೇರವಾಗಿ ಕಾರ್ಖಾನೆಗೇ ಕೊಡೋಕೆ ಶುರುಮಾಡಿದ್ರು. ಗಾಣ ಹಚ್ಚೋದು ಅಂದ್ರ ಖರ್ಚು ಜಾಸ್ತಿ, ಕೆಲಸ ಕಷ್ಟ ಅಂತ ಅನೇಕರು ಬಿಟ್ರು. ಹೀಗೆ ನಮ್ಮ ಹಳ್ಳಿಯ ಗಾಣಗಳು ಒಂದೊಂದಾಗಿ ಬಂದ್ ಆದ್ವು. ಇವತ್ತು ಅನೇಕ ಕಡೆ ಗಾಣದ ಜಾಗಗಳು ಭಣಗುಡುತ್ತಿವೆ. ಅಲ್ಲಿ ಹೊಗೆ ಇಲ್ಲ, ಕಬ್ಬಿನ ರಾಶಿ ಇಲ್ಲ, ಕೆಲಸದ ಗದ್ದಲವೂ ಇಲ್ಲ. ಬೆಲ್ಲದ ಗಾಣಗಳ ನೆನಪು ಮಾತ್ರ ಈಗ ಉಳಿದಿವೆ.
ಈ ಕುರಿತು ಬೆಳಗಾವಿ ಜಿಲ್ಲೆಯ ಹಲಗತ್ತಿ ಗ್ರಾಮದ ಬಸಪ್ಪ ಈ ದಿನ.ಕಾಮ್ ಜತೆಗೆ ಮಾತನಾಡಿ, “ನಾವು ಬೆಳೆದ ಕಬ್ಬನ್ನೇ ಗಾಣಕ್ಕೆ ತಂದು ರಸ ತೆಗೀತಿದ್ವಿ. ದೊಡ್ಡ ಬಾಣಲಿಯಲ್ಲಿ ಗಂಟೆಗಟ್ಟಲೆ ಕಾಯಿಸಿ, ಕೈಯಿಂದಲೇ ಪಾಕ ಕಲೆ ಹಾಕ್ತಿದ್ವಿ. ಆ ಪಾಕ ಸರಿಯಾಗಿ ಬಂದ್ಮಲೆ ಅಚ್ಚಿಗೆ ಹಾಕಿದ್ರೆ ಬೆಲ್ಲದ ಪೆಂಟಿ ಸಿದ್ಧ. ಆ ಸಿಹಿ ಇಂದಿನ ಕಾರ್ಖಾನೆ ಬೆಲ್ಲದಲ್ಲಿ ಸಿಗೋದಿಲ್ಲಪ್ಪಾ” ಎಂದು ತಮ್ಮ ಅನುಭವದ ಮಾತನ್ನು ಹಂಚಿಕೊಂಡರು.

ಕಿತ್ತೂರ ಸಮೀಪದ ರೈತ ಶಿವಪ್ಪ ಮಾತನಾಡಿ, “ಗಾಣದ ಸಮಯ ಬಂದ್ಮಲೆ ನಮ್ಮ ಮನೆಯವರಿಗೆಲ್ಲ ದಿನಗೂಲಿ ಕೆಲಸ ಸಿಗ್ತಿತ್ತು. ನಾನು ರಸ ತೆಗೀತಿದ್ದೆ, ನನ್ನ ಅಣ್ಣ ಪಾಕ ಕಲೆಹಾಕ್ತಿದ್ದ, ಮನೆಯವರು ಅಚ್ಚು ಹಾಕ್ತಿದ್ರು. ಹೀಗೇ ಒಂದು ಗಾಣ ಹಚ್ಚಿದ್ರೆ ಹಳ್ಳಿಯ ಐದು ಹತ್ತು ಮನೆಗಳಿಗೆ ಕೆಲಸ ಸಿಗ್ತಿತ್ತು. ಆದ್ರ ಈಗ ಬೆಲ್ಲದ ಗಾಣಗಳು ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಪಾಕ ಅಚ್ಚಿಗೆ ಹಾಕೋ ಕೆಲಸ ನಾವು ಮಾಡ್ತಿದ್ವಿ. ಕೈ ಸುಟ್ಟುಕೊಂಡ್ರೂ ಕೆಲಸ ಬಿಡ್ತಿರ್ಲಿಲ್ಲ. ಗಾಣ ಮುಗಿದ್ಮಲೆ ಬಂದ ಕೂಲಿ ಹಣದಿಂದ ಮಕ್ಕಳ ಓದಿಗೆ ಖರ್ಚು ಮಾಡ್ತಿದ್ವಿ, ಮನೆ ದಿನಸಿ ಖರೀದಿ ಮಾಡ್ತಿದ್ವಿ. ಕೂಲಿ ಜತೆಗೆ ಬೆಲ್ಲವೂ ಸಿಗ್ತಿತ್ತು” ಎಂದು ತುರುನೂರು ಗ್ರಾಮದ ಲಕ್ಷ್ಮವ್ವ ಈ ದಿನ.ಕಾಮ್ಗೆ ತಿಳಿಸಿದರು.
ಗಾಣ ಅಂದ್ರೆ ಕೇವಲ ಬೆಲ್ಲ ಮಾಡೋ ಜಾಗ ಅಲ್ಲ, ಅದು ನಮ್ಮ ಸಂಸ್ಕೃತಿ. ಸರ್ಕಾರ ಸ್ವಲ್ಪ ಪ್ರೋತ್ಸಾಹ ಕೊಟ್ರೆ, ಜನರಿಗೆ ಆರೋಗ್ಯಯುತವಾದ ಬೆಲ್ಲವು ಸಿಗ್ತೈತಿ, ರೈತರಿಗೆ ಸರಿಯಾದ ಬೆಲೆಯೂ ಸಿಗ್ತೈತಿ. ಹಳ್ಳಿಯ ಜನರಿಗೆ ಉದ್ಯೋಗ ಸಿಗ್ತೈತಿ ಅನ್ನೋದು ರೈತರ ಅಭಿಪ್ರಾಯವಾಗಿದೆ.
ಬೆಲ್ಲದ ಪಾಕ ಅಂದ್ರೆ ಅದ್ಭುತ ರುಚಿ
“ಕಬ್ಬಿನ ಹಾಲನ್ನ ದೊಡ್ಡ ಬಾಣಲಿಯಲ್ಲಿ ನಿಧಾನವಾಗಿ ಕಾಯಿಸಿದಾಗ ಗಟ್ಟಿ ಆಗ್ತಾ ಬಂದ ಪಾಕ ಬಿಸಿ ಬಿಸಿಯಾಗಿಯೇ ಸಿದ್ಧವಾಗ್ತಿತ್ತು. ಆ ಬೆಲ್ಲದ ಪಾಕವನ್ನ ಚಪಾತಿಗೆ ಹಚ್ಕೊಂಡು ಅಥವಾ ಜೋಳದ ರೊಟ್ಟಿಗೆ ಹಚ್ಕೊಂಡು ತಿನ್ನೋದಂದ್ರೆ ಹೇಳೋಕೆ ಮಾತೇ ಸಾಲೋದಿಲ್ಲ. ಸಿಹಿ, ಸುವಾಸನೆ, ಎಲ್ಲವೂ ಒಂದೇ ಸರಿ ಅನುಭವ ಆಗ್ತಿತ್ತು. ರೈತರು ಗಾಣದಿಂದ ಪಾಕ ತಂದು ಮನೆಗಳಲ್ಲಿ ದೊಡ್ಡ ಪಾತ್ರೆಗಳಲ್ಲಿ ಇಟ್ಟುಕೊಂಡು ತಿಂಗಳಾನಗಟ್ಟಲೇ ಸೇವಿಸುತ್ತಿದ್ರು; ಬೆಳಿಗ್ಗೆ ಊಟಕ್ಕೂ, ರಾತ್ರಿ ಊಟಕ್ಕೂ ಪಾಕ ಇದ್ರೆ ಸಾಕು. ಸಾರು, ಪಲ್ಯ ಬೇಕಾಗಿರಲಿಲ್ಲ. ಮಕ್ಕಳಿಗಂತೂ ಪಂಚ ಪ್ರಾಣವಾಗಿತ್ತು” ಎನ್ನುತ್ತಾರೆ ಹಿರಿಯರು. ಆದರೆ ಈಗ ಆ ಬಿಸಿ ಬಿಸಿ ಗಾಣದ ಪಾಕದ ಸುವಾಸನೆ ಮಾತ್ರ ನೆನಪಿನಲ್ಲೇ ಉಳಿದಿದೆ.
ಇದನ್ನೂ ಓದಿದ್ದೀರಾ? ʼಬ್ಯಾಡಗಿʼ ಮಾರುಕಟ್ಟೆಯಲ್ಲಿ ಕೆಂಪು ಕ್ರಾಂತಿ; ಅಂತೂ ರೈತರಿಗೆ ಸಿಹಿ ನೀಡಿದ ಮೆಣಸಿನಕಾಯಿ
ಉತ್ತರ ಕರ್ನಾಟಕ ಭಾಗದ ಬೆಲ್ಲದ ಗಾಣಗಳನ್ನು ಉಳಿಸೋಕೆ ಸರ್ಕಾರ ಗಟ್ಟಿಯಾದ ಹೆಜ್ಜೆ ಇಡಬೇಕು. ಸಾಂಪ್ರದಾಯಿಕ ಗಾಣ ಮಾಡುವ ರೈತರಿಗೆ ವಿಶೇಷ ಸಬ್ಸಿಡಿ, ಕಡಿಮೆ ಬಡ್ಡಿದರ ಸಾಲ ಸೌಲಭ್ಯ ಕೊಡ್ಬೇಕು. ಗಾಣದಲ್ಲಿ ತಯಾರಾದ ಬೆಲ್ಲಕ್ಕೆ ಸಾಂಪ್ರದಾಯಿಕ ರಾಸಾಯನಿಕ ರಹಿತ ಅನ್ನೋ ವಿಶೇಷ ಮಾನ್ಯತೆ ನೀಡಿ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು. ಗ್ರಾಮೀಣ ಕೈಗಾರಿಕಾ ಯೋಜನೆಗಳಡಿ ತರಬೇತಿ, ಆಧುನಿಕ ಸುರಕ್ಷತಾ ಸಾಧನಗಳು, ಸುಧಾರಿತ ಬಾಣಲಿಗಳನ್ನು ಕೊಡಿಸಿದ್ರೆ ಉತ್ಪಾದನೆ ಸುಲಭ ಆಗ್ತದೆ. ಶಾಲೆ, ಆಸ್ಪತ್ರೆ, ಅಂಗನವಾಡಿಗಳ ಪೌಷ್ಠಿಕ ಆಹಾರದಲ್ಲಿ ಗಾಣದ ಬೆಲ್ಲ ಬಳಸೋ ನಿರ್ಧಾರ ಮಾಡಿದ್ರೆ ರೈತರಿಗೆ ನೇರ ಬೇಡಿಕೆ ಸಿಗ್ತದೆ. ಪ್ರವಾಸೋದ್ಯಮದ ಜೊತೆ ಗಾಣ ಸಂಸ್ಕೃತಿಯನ್ನು ಕೊಂಡಿ ಹಾಕಿ ಗ್ರಾಮೀಣ ಅನುಭವ ಕೇಂದ್ರಗಳಂತೆ ಅಭಿವೃದ್ಧಿಪಡಿಸಿದ್ರೆ ಯುವಕರಿಗೂ ಉದ್ಯೋಗ ಸೃಷ್ಟಿ ಆಗ್ತಿದೆ. ಹೀಗೆ ಸರ್ಕಾರ ಕೈಹಿಡಿದ್ರೆ ಮರೆಯಾಗ್ತಾ ಇರುವ ಗಾಣಗಳು ಪ್ರಾರಂಭವಾಗಿ ರೈತರ ಬದುಕಿಗೆ ಸಿಹಿ ತಂದುಕೊಡ್ತವೆ.





