ಬೆಳಗಾವಿ ತಾಲೂಕಿನ ಕಲಕಾಂಬ ಗ್ರಾಮದ ರಾಹುಲ್ ಜಯವಂತ ಪಾಟೀಲ (30) ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 224ನೇ ರ್ಯಾಂಕ್ ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ರಾಹುಲ್ ಅವರ ತಂದೆ ಜಯವಂತ ಪಾಟೀಲ ಹಾಗೂ ತಾಯಿ ಸುರೇಖಾ ಪಾಟೀಲ ಕೃಷಿಕರಾಗಿದ್ದು, ಬಡತನದಲ್ಲೇ ಬೆಳೆದು ಕಠಿಣ ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾರೆ.
ಪ್ರಸ್ತುತ ಅವರು ಡೆಹರಾಡೂನ್ನ ಇಂದಿರಾ ಗಾಂಧಿ ನ್ಯಾಷನಲ್ ಫಾರೆಸ್ಟ್ ಅಕಾಡೆಮಿ (ಐಜಿಎನ್ಎಫ್ಎ)ಯಲ್ಲಿ ಕಳೆದ ನಾಲ್ಕು ತಿಂಗಳಿಂದ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ತರಬೇತಿ ಪಡೆಯುತ್ತಿದ್ದಾರೆ.
ರಾಹುಲ್ ಅವರು ಯುಪಿಎಸ್ಸಿ ಪರೀಕ್ಷೆಯನ್ನು ಒಟ್ಟು ಆರು ಬಾರಿ ಬರೆದಿದ್ದಾರೆ. 2023ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 804ನೇ ರ್ಯಾಂಕ್ ಪಡೆದಿದ್ದರಿಂದ ಭಾರತೀಯ ರೈಲ್ವೆ ಸಂಚಾರ ಸೇವೆಗೆ ಸೇರಿದ್ದರು. ಬಳಿಕ ಅರಣ್ಯ ಸೇವೆಯಲ್ಲಿ 103ನೇ ರ್ಯಾಂಕ್ ಸಿಕ್ಕ ಹಿನ್ನೆಲೆಯಲ್ಲಿ ಭಾರತೀಯ ಅರಣ್ಯ ಸೇವೆಗೆ ಸೇರ್ಪಡೆಯಾಗಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಬೆಳಗಾವಿ ನಗರದ ವನಿತಾ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದು, ಕೆಎಲ್ಇ ಆರ್ಎಲ್ಎಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ.
ಬಡ ರೈತ ಕುಟುಂಬದಿಂದ ಬಂದ ರಾಹುಲ್ ಅವರ ಈ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಕಲಕಾಂಬ ಗ್ರಾಮ ಹಾಗೂ ಬೆಳಗಾವಿ ಜಿಲ್ಲೆಗೆ ಹೆಮ್ಮೆ ತಂದಿದೆ.




