ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ರಾಮದುರ್ಗ ರೈಲ್ವೆ ಹೋರಾಟ ಸಮಿತಿಯಿಂದ ರೈಲ್ವೆ ಯೋಜನೆ ಕುರಿತು ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ರೈಲ್ವೆ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕುತುಬುದ್ದಿನ್ ಖಾಜಿ, ರಾಮದುರ್ಗ-ಸವದತ್ತಿ ರೈಲು ಮಾರ್ಗಕ್ಕಾಗಿ ಈಗಾಗಲೇ ಸಚಿವರು ಹಾಗೂ ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಮದುರ್ಗ ತಾಲೂಕಿನ ಎಲ್ಲಾ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.
ಶಾಲಿನಿಯವರು ಮಾತನಾಡಿ, ರಾಮದುರ್ಗಕ್ಕೆ ರೈಲು ಸಂಪರ್ಕ ದೊರೆತರೆ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಜೊತೆಗೆ ಸವದತ್ತಿಯ ಯಲ್ಲಮ್ಮ ಹಾಗೂ ಶಿರಸಂಗಿಯ ಕಾಳಮ್ಮ ದೇವಸ್ಥಾನಗಳಿರುವುದರಿಂದ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಅಂಜುಮನ್ ಕಮಿಟಿಯ ಶಫಿ ಬೆಣ್ಣೆ ಮಾತನಾಡಿ, ರೈಲ್ವೆ ಯೋಜನೆಗಾಗಿ ನಾವು ಹಾಗೂ ಹೋರಾಟ ಸಮಿತಿಯವರು ಇದುವರೆಗೂ ಸಚಿವರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದೇವೆ.
ಈ ಹೋರಾಟದ ಯಶಸ್ಸಿನ ಕ್ರೆಡಿಟ್ ಯಾರೇ ತೆಗೆದುಕೊಂಡರೂ ಪರವಾಗಿಲ್ಲ, ಆದರೆ ರಾಮದುರ್ಗ-ಸವದತ್ತಿ ಮಾರ್ಗದಲ್ಲಿ ರೈಲ್ವೆ ಯೋಜನೆ ಅನುಷ್ಠಾನವಾಗಬೇಕು ಎಂಬುದೇ ನಮ್ಮ ಮುಖ್ಯ ಉದ್ದೇಶ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ರಂಗನಗೌಡರ ಮಾತನಾಡಿ, ರೈಲ್ವೆ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಹಾಗೂ ಶಾಸಕರ ಸಂಪೂರ್ಣ ಬೆಂಬಲ ಇರಲಿದೆ ಎಂದು ಭರವಸೆ ನೀಡಿದರು.
ಡಿ.ಎಸ್.ಎಸ್ ಸಂಘಟನೆಯ ಬಿ.ಆರ್. ದೊಡ್ಡಮನಿ ಮಾತನಾಡಿ, ರೈಲ್ವೆ ಹೋರಾಟಕ್ಕೆ ದಲಿತ ಸಂಘಟನೆಗಳ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಪ್ರೊ. ಚಿಕ್ಕ ನರಗುಂದ ಅವರು ಮಾತನಾಡಿ, ಈ ಹೋರಾಟದಲ್ಲಿ ಯಾರೂ ಅಮುಖ್ಯರಲ್ಲ, ಯಾರೂ ಅಲ್ಪರಲ್ಲ. ಇದು ರಾಜಕೀಯ, ಧರ್ಮ ಮತ್ತು ಭಾಷೆ ಮೀರಿದ ಜನಪರ ಹೋರಾಟವಾಗಿದೆ ಎಂದು ಹೇಳಿದರು.
ಕಾರ್ಮಿಕ ಸಂಘಟನೆಯ ಗೈಬು ಜೈನೆಖಾನ್ ಮಾತನಾಡಿ, ರೈಲ್ವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಎಲ್ಲಾ ಪಕ್ಷಗಳು, ಸಂಘಟನೆಗಳು ಹಾಗೂ ಎಲ್ಲ ಜಾತಿ-ಧರ್ಮದವರು ಒಗ್ಗಟ್ಟಾಗಿ ಹೋರಾಟ ನಡೆಸುತ್ತಿರುವುದರಿಂದ ಈ ಹೋರಾಟಕ್ಕೆ ಖಂಡಿತ ಯಶಸ್ಸು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ವಿಜಯ ಸೇನಾ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.
ಶಿರಸಂಗಿಯಲ್ಲಿ ರೈಲ್ವೆ ಹೋರಾಟ ಸಮಿತಿಯ ಸಭೆ
ಬೆಳಗಾವಿ ಜಿಲ್ಲೆಯ ಶಿರಸಂಗಿ ಗ್ರಾಮದಲ್ಲಿ ರೈಲ್ವೆ ಹೋರಾಟ ಸಮಿತಿ ಸಭೆ ನಡೆಸಲಾಯಿತು
ಈ ಸಂದರ್ಭದಲ್ಲಿ ಶಿರಸಂಗಿಯ ಗ್ರಾಮ ಪಂಚಾಯತಿಯ ಸದಸ್ಯರು ಊರಿನ ಹಿರಿಯರು ಭಾಗವಹಿಸಿ ರೈಲ್ವೆ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.





