ಬೆಳಗಾವಿ ಜಿಲ್ಲೆಯ ಕೃಷಿ ಭವಿಷ್ಯ ಈ ಬಜೆಟ್ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ. ಮಾತುಗಳಿಗಿಂತ ಕೆಲಸದ ಮೂಲಕ ರೈತರ ವಿಶ್ವಾಸ ಗೆಲ್ಲುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂಬುದು ರೈತ ಸಮುದಾಯದ ಒಮ್ಮತದ ಅಭಿಪ್ರಾಯವಾಗಿದೆ.
ರಾಜ್ಯ ಬಜೆಟ್ ಅಂದ್ರೆ ಹೆಚ್ಚು ಕಾತರದಿಂದ ಕಾಯೋದು ರೈತ ಸಮುದಾಯವೇ ಆಗಿದೆ. ಈ ಬಾರಿ ಮಾರ್ಚ್ 6ರಂದು ಮಂಡನೆಯಾಗಲಿರುವ ಬಜೆಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ 17ನೇ ಬಜೆಟ್ ಆಗಿದೆ. ಈ ಬಜೆಟ್ನಲ್ಲಿ ರೈತರಿಗೇನು ಸಿಗುತ್ತದೆ? ಕೃಷಿಗೆ ಎಷ್ಟು ಅನುದಾನ ಕೊಡುತ್ತಾರೆ ಎನ್ನುವುದು ಎಲ್ಲರಲ್ಲೂ ದೊಡ್ಡ ಪ್ರಶ್ನೆಯಾಗಿದೆ.
ವಿಶೇಷವಾಗಿ ಬೆಳಗಾವಿ ಜಿಲ್ಲೆಯ ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದು, ನೀರಾವರಿ ಯೋಜನೆಗಳು ಪೂರ್ಣ ಆಗಬೇಕು, ಪಶು ಸಂಗೋಪನೆ, ಡ್ರಿಪ್-ಸ್ಪಿಂಕ್ಲರ್ಗೆ ಜಾಸ್ತಿ ಸಹಾಯಧನ ಕೊಡಬೇಕೆಂದು ಕೇಳುತ್ತಿದ್ದಾರೆ. ಬೆಳೆ ಹಾಳಾದ್ರೆ ತಕ್ಷಣ ಪರಿಹಾರ ಸಿಗಬೇಕು, ಬೆಳೆಗಳಿಗೆ ಒಳ್ಳೇ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂಬುದನ್ನೂ ಒತ್ತಾಯಿಸುತ್ತಿದ್ದಾರೆ.
ಬೆಳಗಾವಿ ಭಾಗದ ರೈತರು, ʼಬಜೆಟ್ ನಮ್ಮ ಬದುಕು ಬದಲಿಸಬೇಕುʼ ಎಂಬ ಆಶೆ ಇಟ್ಟುಕೊಂಡಿದ್ದಾರೆ. ಈ ಬಾರಿಯಾದ್ರೂ ಸರ್ಕಾರ ರೈತರ ಮಾತು ಕೇಳುವುದೋ ಇಲ್ಲವೋ ಎನ್ನುವ ಕುತೂಹಲ ರೈತರಲ್ಲಿ ಜಾಸ್ತಿಯಾಗಿದೆ.
ಬೆಳಗಾವಿ ಜಿಲ್ಲೆ ನಮ್ಮ ರಾಜ್ಯದ ದೊಡ್ಡ ಕೃಷಿ ಜಿಲ್ಲೆ. ಕಬ್ಬು, ಹತ್ತಿ, ಸೊಯಾಬಿನ್, ಜೋಳ, ಮೆಕ್ಕೆಜೋಳ ಬೆಳೆಯುತ್ತಾರೆ. ಮಾವು, ದ್ರಾಕ್ಷಿ, ಬಾಳೆ ಬೆಳೆಗಳನ್ನೂ ಕೂಡ ಸಿಕ್ಕಾಪಟ್ಟೆ ಬೆಳೆಯಲಾಗುತ್ತದೆ. ಜಿಲ್ಲೆಗೆ ʼಸಕ್ಕರೆಯ ಬಟ್ಟಲುʼ ಎಂದೂ ಕರೆಯುತ್ತಾರೆ. ಆದ್ರೆ ಈ ಎಲ್ಲ ಬೆಳೆ ಬೆಳೆದ್ಮೇಲೆ ರೈತನಿಗೆ ಸರಿ ಬೆಲೆ ಸಿಕ್ರೇನೇ ಖುಷಿ, ಇಲ್ಲದಿದ್ರೆ ಶ್ರಮ ಹಾಳಾಗತ್ತೈತಿ ಎನ್ನುತ್ತಾರೆ. ಇದೇ ಕಾರಣಕ್ಕೆ ಇಲ್ಲಿನ ರೈತರು ರಾಜ್ಯ ಬಜೆಟ್ ಮೇಲೆ ವಿಶೇಷ ನಿರೀಕ್ಷೆ ಇಟ್ಟಿದ್ದಾರೆ.
ಈ ಕುರಿತು ಭಾರತೀಯ ಕೃಷಿಕ ಸಮಾಜ ಸಂಘಟನೆಯ ಅಧ್ಯಕ್ಷ ಸಿದಗೌಡ ಮೋದಗಿ ಅವರು ಈ ದಿನ.ಕಾಮ್ ಜತೆಗೆ ಮಾತನಾಡಿ, “ಜಿಲ್ಲೆಯ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಬಜೆಟ್ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು. ಜಿಲ್ಲೆಯಲ್ಲಿ ಅನೇಕ ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತಿರುವುದು ಗಂಭೀರ ಸಮಸ್ಯೆಯಾಗಿದೆ. ಹಾಗಾಗಿ ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ವಿಶೇಷವಾಗಿ ಕಳಸಾ ಬಂಡೂರಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಉತ್ತರ ಕರ್ನಾಟಕದ ನೀರಿನ ತೊಂದರೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು” ಎಂದು ಹೇಳಿದರು.
“ಕೃಷಿ ಸಲಕರಣೆಗಳಿಗೆ ನೀಡುವ ಸಬ್ಸಿಡಿಯನ್ನು ಏಳು ವರ್ಷಗಳಿಗೊಮ್ಮೆ ನೀಡುವ ಬದಲು ಪ್ರತಿವರ್ಷ ನೀಡಬೇಕು. ರೈತರಿಗೆ ಪ್ರತಿ ವರ್ಷ ಉಚಿತ ಪಹಣಿ ಪತ್ರ ವಿತರಣೆ ಮಾಡಬೇಕು. ಬೆಳಗಾವಿಯಲ್ಲಿ ಬೀಜ ಸಂಶೋಧನಾ ಕೇಂದ್ರ ಸ್ಥಾಪಿಸಿ, ಬೀಜ-ರಸಗೊಬ್ಬರ-ಕೃಷಿ ಉಪಕರಣಗಳ ಗುಣಮಟ್ಟ ಪರಿಶೀಲನೆಗೆ ತಜ್ಞರ ತಂಡವನ್ನು ನೇಮಿಸಬೇಕು” ಎಂದು ಮನವಿ ಮಾಡಿದರು.
ಪ್ರವಾಹ, ಬರಗಾಲ ಸೇರಿದಂತೆ ಅನೇಕ ವಿಕೋಪ ಸಂದರ್ಭಗಳಲ್ಲಿ ರೈತರಿಗೆ ನೆರವಾಗಲು ವಿಶೇಷ ನಿಧಿ ಸ್ಥಾಪನೆ ಅಗತ್ಯ. 60 ವರ್ಷ ಮೇಲ್ಪಟ್ಟ ರೈತರಿಗೆ ತಿಂಗಳಿಗೆ ₹5,000 ಸಹಾಯಧನ ನೀಡಬೇಕು. ಅಥಣಿ, ರಾಯಬಾಗ, ಕುಡಚಿ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುತ್ತಿರುವುದರಿಂದ ಶೀತಲ ಘಟಕಗಳು ಹಾಗೂ ಆಹಾರ ಸಂಸ್ಕರಣಾ ಘಟಕಗಳನ್ನು ನಿರ್ಮಿಸಬೇಕು” ಎಂದರು.
ಬೆಳಗಾವಿ ಜಿಲ್ಲೆಯನ್ನು ವಾಣಿಜ್ಯ ವಲಯವನ್ನಾಗಿ ಪರಿಗಣಿಸಿ ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಬೇಕು. ಕೇರಳ ಮಾದರಿಯಲ್ಲಿ ರೈತರ ಆತ್ಮಹತ್ಯೆ ತಡೆ ಆಯೋಗ ರಚನೆ ಮಾಡಿ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಕಬ್ಬಿನ ಇಳುವರಿ ಹೆಚ್ಚಿಸಲು ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು ಹಾಗೂ ಕೃಷಿ ಪರಿಷತ್ತು ರಚಿಸಬೇಕು. ಈ ಎಲ್ಲ ಯೋಜನೆಗಳಿಗೆ ಪ್ರಸ್ತುತ ಬಜೆಟ್ನಲ್ಲಿ ಸಮರ್ಪಕ ಅನುದಾನ ಮೀಸಲಿಟ್ಟು, ರೈತರ ಬದುಕಿಗೆ ಭದ್ರತೆ ಒದಗಿಸಬೇಕು ಹಾಗೂ ಪಿಕೆಪಿಎಸ್ನಿಂದ ರೈತರಿಗೆ ಪ್ರತಿ ಎಕರೆಗೆ ಒಂದು ಲಕ್ಷ ಬಡ್ಡಿರಹಿತ ಸಾಲ ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.
ಹುಕ್ಕೇರಿ ತಾಲೂಕಿನ ರೈತ ಸಂಘಟನೆಯ ಮುಖಂಡ ಮಲ್ಲಿಕಾರ್ಜುನ ಜಕಾತಿ ಅವರು ಈ ದಿನ.ಕಾಮ್ ಜತೆ ಮಾತನಾಡಿ, “ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಸುವ ರೈತರಿಗೆ ವಿಶೇಷ ಪ್ರೋತ್ಸಾಹ ನೀಡಬೇಕು. ಸಿರಿಧಾನ್ಯಗಳಿಗೆ ಪ್ರತ್ಯೇಕ ಪ್ರೊಸೆಸಿಂಗ್ ಘಟಕಗಳನ್ನು ಸ್ಥಾಪಿಸಿದರೆ ರೈತರಿಗೆ ಮೌಲ್ಯವರ್ಧನೆಯಾಗಿ ಉತ್ತಮ ಆದಾಯ ಸಿಗುತ್ತದೆ. ವಾಣಿಜ್ಯ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ದಲ್ಲಾಳಿಗಳ ಹಾವಳಿ ನಿಯಂತ್ರಣಕ್ಕೆ ಪಾರದರ್ಶಕ ಖರೀದಿ ವ್ಯವಸ್ಥೆ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಹಾಲು ಉತ್ಪಾದಕರ ಸಮಸ್ಯೆಯನ್ನೂ ಪ್ರಸ್ತಾಪಿಸಿದ ಅವರು, “ಡೈರಿಗಳಲ್ಲಿ ಹಾಲಿನ ಫ್ಯಾಟ್ ಪರೀಕ್ಷೆಗಳಲ್ಲಿ ಅನ್ಯಾಯವಾಗುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಾಲು ಉತ್ಪಾದಕರ ಹಿತಾಸಕ್ತಿಯನ್ನು ಕಾಪಾಡುವ ಕ್ರಮಗಳು ಈ ಬಜೆಟ್ನಲ್ಲಿ ಪ್ರತಿಫಲಿಸಬೇಕು” ಎಂದು ಮನವಿ ಮಾಡಿದರು.
ಬೈಲಹೊಂಗಲ ತಾಲೂಕಿನ ರೈತ ಸಂಘಟನೆಯ ಮುಖಂಡ ಬಸವನಗೌಡ ಚಿಕ್ಕನಗೌಡರ ಈ ದಿನ.ಕಾಮ್ ಜತೆ ಮಾತನಾಡಿ, “1973ರಲ್ಲಿ ಆರಂಭವಾದ ಮಲಪ್ರಭಾ ನದಿ ಯೋಜನೆಯಡಿ 11 ಜಾಕ್ವೆಲ್ಗಳನ್ನು ನಿರ್ಮಿಸಲು ಹಣ ಮಂಜೂರಾದರೂ ಕಾರ್ಯಾರಂಭವಾಗಿಲ್ಲ. ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದ ಈ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು” ಎಂದು ಆಗ್ರಹಿಸಿದರು.
ರಾಮದುರ್ಗ ತಾಲೂಕಿನ ರೈತ ಸಂಘಟನೆಯ ಮುಖಂಡ ಜಗದೀಶ ದೇವರಡ್ಡಿ ಈ ದಿನ.ಕಾಮ್ ಜತೆ ಮಾತನಾಡಿ, “2016ರ ಜನವರಿಯಲ್ಲಿ ಸುಮಾರು ₹544 ಕೋಟಿ ವೆಚ್ಚದಲ್ಲಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಲಾಗಿತ್ತು. ಘಟಪ್ರಭಾ ನದಿಯಿಂದ ನೀರನ್ನು ಎತ್ತಿ ರಾಮದುರ್ಗ ಹಾಗೂ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸುಮಾರು 17,377 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಗುರಿ ಹೊಂದಿರುವ ಈ ಯೋಜನೆ ಇನ್ನೂ ಸಂಪೂರ್ಣಗೊಳ್ಳದಿರುವುದು ರೈತರಿಗೆ ನಿರಾಸೆ ತಂದಿದೆ. ಈ ಯೋಜನೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಬಜೆಟ್ನಲ್ಲಿ ಸಮರ್ಪಕ ಹಣ ಮೀಸಲಿಡಬೇಕು” ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ, ₹536 ಕೋಟಿ ವೆಚ್ಚದ ಸಾಲಾಪುರ ಬಸವೇಶ್ವರ ಏತ ನೀರಾವರಿ ಯೋಜನೆ ಶಾಸಕ ಅಶೋಕ ಪಟ್ಟಣ ಅವರ ಪ್ರಯತ್ನದ ಫಲವಾಗಿ ಪ್ರಾರಂಭಗೊಂಡಿದ್ದು, ಸಾಲಾಪುರ ಗ್ರಾಮದ ಕೃಷಿಭೂಮಿಗೆ ನೀರು ಒದಗಿಸುವ ಉದ್ದೇಶ ಹೊಂದಿದೆ. ಈ ಯೋಜನೆಯ ಕಾಮಗಾರಿಗೂ ವೇಗ ನೀಡಲು ಈ ಬಜೆಟ್ನಲ್ಲೇ ವಿಶೇಷ ಅನುದಾನ ನೀಡಬೇಕೆಂದು ತಿಳಿಸಿದರು.
ಸತ್ತಿಗೇರಿ ನೀರಾವರಿ ಯೋಜನೆ ಘೋಷಣೆಯಷ್ಟೇ ಆಗಿದ್ದು, ಅದನ್ನು ಕಾರ್ಯರೂಪಕ್ಕೆ ತರಲು ಬಜೆಟ್ನಲ್ಲಿ ಹಣ ಮೀಸಲಿಡಬೇಕು. ಅಲ್ಲದೆ, ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ಕೇವಲ ಹೆಸರಿಗಷ್ಟೇ ಉಳಿಯದೆ, ಅದಕ್ಕೆ ನೀರು ಹರಿಸುವಂತೆ ಸ್ಪಷ್ಟ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಇದನ್ನೂ ಓದಿದ್ದೀರಾ? ರಾಜ್ಯ ಬಜೆಟ್ | ವಿಜಯಪುರದ ನಿರೀಕ್ಷೆಗಳೂ ಇವೆ: ನೆರವೇರಿಸುವುದೇ ಸರ್ಕಾರ?
ಒಟ್ಟಾರೆ, ಈ ಬಾರಿಯ ರಾಜ್ಯ ಬಜೆಟ್ ಬೆಳಗಾವಿ ಜಿಲ್ಲೆಯ ರೈತರಿಗೆ ಆಶಾ ಕಿರಣವಾಗಬೇಕೆಂಬ ನಿರೀಕ್ಷೆ ಗಟ್ಟಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ನಲ್ಲಿ ನೀರಾವರಿ ಯೋಜನೆಗಳಿಗೆ ವೇಗ, ಬೆಳೆಗಳಿಗೆ ಸಮರ್ಪಕ ಬೆಂಬಲ ಬೆಲೆ, ಸಬ್ಸಿಡಿ ವಿಸ್ತರಣೆ ಮತ್ತು ವಿಕೋಪ ಪರಿಹಾರಕ್ಕೆ ಸ್ಪಷ್ಟ ಕ್ರಮಗಳು ಪ್ರಕಟವಾಗಬೇಕೆಂಬುದು ರೈತರ ಒಕ್ಕೊರಲ ದನಿಯಾಗಿದೆ.
ಬೆಳಗಾವಿ ಜಿಲ್ಲೆಯ ಕೃಷಿ ಭವಿಷ್ಯ ಈ ಬಜೆಟ್ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ. ಮಾತುಗಳಿಗಿಂತ ಕೆಲಸದ ಮೂಲಕ ರೈತರ ವಿಶ್ವಾಸ ಗೆಲ್ಲುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂಬುದು ರೈತ ಸಮುದಾಯದ ಒಮ್ಮತದ ಅಭಿಪ್ರಾಯವಾಗಿದೆ.





