ರಾಜ್ಯದಲ್ಲಿ ಕಾನೂನುಬಾಹಿರ ಅಶ್ಲೀಲ, ಅಸಭ್ಯ ಗೀತೆಗಳು ಹಾಗೂ ದ್ವಂದಾರ್ಥ ಸಂಭಾಷಣೆಗಳನ್ನು ರಚಿಸಿ ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಜಾತ್ರೆ, ಉತ್ಸವ, ಧಾರ್ಮಿಕ ಸಮಾರಂಭಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ‘ಜಾನಪದ ಗೀತೆ’ಗಳೆಂದು ಬಿಂಬಿಸಿ ಮಹಿಳೆಯರು, ಶಾಲಾ ವಿದ್ಯಾರ್ಥಿನಿಯರು ಮತ್ತು ಮಕ್ಕಳ ಘನತೆ-ಗೌರವಕ್ಕೆ ಅಪಮಾನ ಮಾಡಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಆರೋಪಿಸಿದ್ದಾರೆ
ಈ ಕುರಿತು ಅವರು ರಾಜ್ಯ ಮಹಿಳಾ ಆಯೋಗ, ರಾಜ್ಯ ಡಿಜಿಪಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪೋಕ್ಸ ಕಾಯ್ದೆ-2012, ಐ.ಟಿ. ಕಾಯ್ದೆ-2000, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 296 ಸೇರಿದಂತೆ ಸಂಬಂಧಿತ ವಿಧಿಗಳ ಅಡಿಯಲ್ಲಿ ಅಶ್ಲೀಲ ಗೀತೆಗಳ ರಚನಾಕಾರರು, ಹಾಡುಗಾರರು, ಆಯೋಜಕರು ಹಾಗೂ ಹಣ ನೀಡಿ ಹಾಡಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಜೊತೆಗೆ ಇಂತಹ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಿಂದ ತಕ್ಷಣವೇ ಅಳಿಸಿಹಾಕಿ, ಅನುಮತಿ ಇಲ್ಲದ ಧ್ವನಿವರ್ಧಕ ಬಳಕೆ ಮತ್ತು ಅಕ್ರಮ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದ್ದಾರೆ.
ಇಂತಹ ಅಶ್ಲೀಲತೆ ಯುವಜನತೆಯನ್ನು ದಾರಿ ತಪ್ಪಿಸಿ ಶಿಕ್ಷಣ, ಸಾಮಾಜಿಕ ಸ್ವಾಸ್ಥ್ಯ ಮತ್ತು ಮಹಿಳೆಯರ ಸುರಕ್ಷತೆಗೆ ಗಂಭೀರ ಧಕ್ಕೆ ತರುತ್ತಿದ್ದು, ಅಧಿಕಾರಿಗಳು ಈವರೆಗೆ ಕ್ರಮ ಕೈಗೊಳ್ಳದಿರುವುದು ಖಂಡನೀಯವಾಗಿದೆ. ಕೂಡಲೇ ಸರ್ಕಾರ ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳುವಲ್ಲಿ ವಿಳಂಬವಾದರೆ ಘೋರ ಅನ್ಯಾಯ ಖಂಡಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶ್ರೀನಿವಾಸಗೌಡ ಪಾಟೀಲ ಎಚ್ಚರಿಕೆ ನೀಡಿದ್ದಾರೆ.




