ವಿದೇಶದಲ್ಲಿ ಕೈ ತುಂಬ ಸಂಬಳದ ಕೆಲಸ ನೀಡುವ ನೆಪದಲ್ಲಿ ಸೈಬರ್ ವಂಚಕರು ಬೆಳಗಾವಿಯ ಮೂವರು ಯುವಕರನ್ನು ಕಾಂಬೋಡಿಯಾಗೆ ಕರೆದೊಯ್ದು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿಯ ಆಕಾಶ್ ಕಾಗಣಿಕರ, ಓಂಕಾರ ಲೋಖಾಂಡೆ ಹಾಗೂ ಸಂಸ್ಕಾರ ಲೋಖಾಂಡೆ ಎಂಬ ಯುವಕರು ಸುಮಾರು ಒಂದು ತಿಂಗಳ ಕಾಲ ಸೈಬರ್ ವಂಚನಾ ಕೇಂದ್ರದಲ್ಲಿ ನರಕಯಾತನೆ ಅನುಭವಿಸಿದ್ದಾರೆ.
ಹಾಂಕಾಂಗ್ನಲ್ಲಿ ತಿಂಗಳಿಗೆ 1 ಲಕ್ಷ ರೂ. ಸಂಬಳದ ಕೆಲಸ ನೀಡುವುದಾಗಿ ನಂಬಿಸಿ, ಬೆಳಗಾವಿ ಮೂಲದ ಏಜೆಂಟ್ಗಳ ಮೂಲಕ ಯುವಕರನ್ನು ವಿದೇಶಕ್ಕೆ ಕಳುಹಿಸಲಾಗಿತ್ತು. ಆದರೆ ಹಾಂಕಾಂಗ್ಗೆ ಬದಲಾಗಿ ಆರೋಪಿಗಳು ಅವರನ್ನು ಕಾಂಬೋಡಿಯಾಗೆ ಸಾಗಿಸಿ, ವಾಟ್ಸಪ್ ಮತ್ತು ಇನ್ಸ್ಟಾಗ್ರಾಂ ಮೂಲಕ ಸೈಬರ್ ವಂಚನೆ ನಡೆಸಲು ಬಲವಂತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಲಸ ಮಾಡಲು ನಿರಾಕರಿಸಿದಾಗ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.
ಈ ಕುರಿತು ಆಕಾಶ್ ಹಾಗೂ ಲೋಖಾಂಡೆ ಸಹೋದರರ ತಂದೆ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು, ಕಾಂಬೋಡಿಯಾದಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಅದರಂತೆ ಕಾಂಬೋಡಿಯಾ ಪೊಲೀಸರು ಸೈಬರ್ ವಂಚನಾ ಕೇಂದ್ರದ ಮೇಲೆ ದಾಳಿ ನಡೆಸಿ, ಭಾರತ ಸೇರಿದಂತೆ ವಿವಿಧ ದೇಶಗಳ 50ಕ್ಕೂ ಹೆಚ್ಚು ಯುವಕರನ್ನು ರಕ್ಷಿಸಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಜೀವಂತ ರೈತನಿಗೆ ಮರಣ ಪ್ರಮಾಣಪತ್ರ: ನಾಲ್ವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು
ಈ ಕಾರ್ಯಾಚರಣೆ ಬೆಳಗಾವಿ ಸಿಇಎನ್ ಠಾಣೆಯ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡದ ನಿರಂತರ ಪ್ರಯತ್ನದಿಂದ ಯಶಸ್ವಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಸುರೇಶ್ ಹುಂದ್ರೆ, ಆಸೀಫ್ ಅಲ್ವಾನ್ ಹಾಗೂ ಜಾರ್ಖಂಡ್ ಮೂಲದ ಅಮಿತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ತನಿಖೆ ಮುಂದುವರಿಸಿದ್ದಾರೆ.





