ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಮದುರ್ಗ ತಾಲೂಕಿನಿಂದ ನಿರ್ದೇಶಕರಾಗಿ ಮಲ್ಲಣ್ಣ ಯಾದವಾಡ ಗೆಲುವು ಸಾಧಿಸಿದ ಸಂಭ್ರಮದ ಮಧ್ಯೆಯೇ ದುರಂತ ಸಂಭವಿಸಿದೆ. ಶಾಸಕ ಅಶೋಕ್ ಪಟ್ಟಣ ಅವರ ಆಪ್ತ ಹಾಗೂ ಪಿಕೆಪಿಎಸ್ ಮಾಜಿ ಅಧ್ಯಕ್ಷ ಗಿರಿಯಪ್ಪ ಗಂಟೋಟಿ (40) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರಾಮದುರ್ಗ ತಾಲೂಕಿನ ಕಮಕೇರಿ ಗ್ರಾಮದ ನಿವಾಸಿಯಾಗಿದ್ದ ಗಿರಿಯಪ್ಪ ಅವರು, ಮಲ್ಲಣ್ಣ ಯಾದವಾಡ ಪರವಾಗಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಕ್ರಿಯ ಪ್ರಚಾರ ನಡೆಸಿದ್ದರು. ಶಾಸಕ ಅಶೋಕ್ ಪಟ್ಟಣ ಅವರೊಂದಿಗೆ ಪಾದಯಾತ್ರೆ, ಸಭೆ ಹಾಗೂ ಕಾರ್ಯಕರ್ತರ ಸಂಭ್ರಮದಲ್ಲಿ ಭಾಗವಹಿಸಿದ್ದ ಗಿರಿಯಪ್ಪ ಅವರು, ಫಲಿತಾಂಶ ಘೋಷಣೆಯಾದ ದಿನ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಆದರೆ ರಾತ್ರಿ ತಡರಾತ್ರಿ ಅವರಿಗೆ ಅಸ್ವಸ್ಥತೆ ಉಂಟಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಹೃದಯಾಘಾತದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಈ ದುರ್ಘಟನೆಯಿಂದ ರಾಮದುರ್ಗ ಮತ್ತು ಬೆಳಗಾವಿ ರಾಜಕೀಯ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಗಿರಿಯಪ್ಪ ಅವರ ಅಕಾಲಿಕ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮೃತರ ಕುಟುಂಬದವರನ್ನು ಶಾಸಕರಾದ ಅಶೋಕ್ ಪಟ್ಟಣ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಭೇಟಿ ಮಾಡಿ ಸಾಂತ್ವನ ನೀಡಿದ್ದಾರೆ.





