“ಇದು ಯೋಜನೆ ಅಲ್ಲ ನಮ್ಮ ಅನ್ನ ಕಸಿಯುವ ಹುನ್ನಾರ” ಎಂದು ನರೇಗಾ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಭುಗಿಲೆದ್ದರು. ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಹಾಗೂ ಜಾಗೃತ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ವಿಬಿಜಿ ರಾಮ್ ಜಿ ಯೋಜನೆಯನ್ನು ತಿರಸ್ಕರಿಸಿ, ಮನರೇಗಾ ಉಳಿಸಿ ಎಂಬ ಘೋಷಣೆಯೊಂದಿಗೆ ಬೆಳಗಾವಿ ನಗರದಲ್ಲಿ ಭಾವನಾತ್ಮಕ ಪ್ರತಿಭಟನೆ ನಡೆಯಿತು.
ವಿಬಿಜಿ ರಾಮ್ ಜಿ ಹೆಸರಿನಲ್ಲಿ ಮನರೇಗಾ ಯೋಜನೆಯ ನಿಯಮಗಳನ್ನು ಬದಲಾಯಿಸಿ ಕೇಂದ್ರ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತರುತ್ತಿರುವುದು ಬಡ ಕೂಲಿ ಕಾರ್ಮಿಕರ ಹಕ್ಕು, ಬದುಕು ಹಾಗೂ ಅನ್ನವನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೇಂದ್ರ ಸರ್ಕಾರದ ಆದೇಶದ ಪ್ರತಿಗಳನ್ನು ಹರಿದು ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.

ಕಾರ್ಮಿಕ ಸಂಘಟನೆಯ ಮುಖಂಡ ದಿಲೀಪ್ ಕಾಮತ್ ಮಾತನಾಡಿ, ಸ್ವಾತಂತ್ರ್ಯ ನಂತರ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಮೊದಲ ಬಾರಿಗೆ ಬದುಕಿನ ಭರವಸೆಯಾಗಿ ಮನರೇಗಾ ಕಾನೂನು ಬಂದಿತ್ತು. ಕುಟುಂಬಕ್ಕೆ 100 ದಿನಗಳ ಕೆಲಸ ಗ್ಯಾರಂಟಿ ಇತ್ತು. ಹೊಸ ಯೋಜನೆಯಲ್ಲಿ 125 ದಿನ ಎನ್ನಲಾಗುತ್ತಿದೆಯಾದರೂ ಅದಕ್ಕೆ ಗ್ಯಾರಂಟಿಯೇ ಇಲ್ಲ. ಮಹಾತ್ಮ ಗಾಂಧೀಜಿ ಹೆಸರು ಕೈಬಿಟ್ಟು, ಅವರ ಅಂತ್ಯೋದಯ–ಸರ್ವೋದಯದ ತತ್ವವನ್ನೇ ಮರೆತಿದ್ದಾರೆ. ದೆಹಲಿಯಿಂದ ಗ್ರಾಮೀಣ ಬದುಕಿನ ಮೇಲೆ ನಡೆಯುತ್ತಿರುವ ದಾಳಿ ನಮಗೆ ಸ್ವೀಕಾರಾರ್ಹವಲ್ಲ” ಎಂದು ನೋವಿನಿಂದ ಹೇಳಿದರು.
ಹೊಸ ಯೋಜನೆಯಲ್ಲಿ ಕೂಲಿ ಮೊತ್ತವನ್ನೇ ನಿರ್ಧರಿಸದಿರುವುದು ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಆರೋಪಿಸಿದ ಅವರು, ಹಿಂದೆ ಮನರೇಗಾದಲ್ಲಿ ಕೇಂದ್ರ ಸರ್ಕಾರ 90% ಮತ್ತು ರಾಜ್ಯ ಸರ್ಕಾರ 10% ವೆಚ್ಚ ವಹಿಸುತ್ತಿತ್ತು. ಈಗ ಕೇಂದ್ರ 60%, ರಾಜ್ಯ 40% ಎಂದು ಬದಲಾಯಿಸಿದ್ದಾರೆ. ಬಿಜೆಪಿಯೇತರ ರಾಜ್ಯಗಳಿಗೆ ತೆರಿಗೆ ಹಣವೇ ಸಿಗದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಕ್ಕೆ ಇದು ಸಾಧ್ಯವೇ? ಅಂತಿಮವಾಗಿ ಕೂಲಿ ಕಾರ್ಮಿಕರ ಕೈಗೆ ಕೆಲಸವೂ ಕೂಲಿಯೂ ಸಿಗದು” ಎಂದು ಎಚ್ಚರಿಸಿದರು.

ನರೇಗಾ ಕಾರ್ಮಿಕೆ ಮಹಾನಂದಾ ಮಾತನಾಡಿ, 2010ರಿಂದ ನರೇಗಾ ಕೆಲಸವೇ ನಮ್ಮ ಕುಟುಂಬದ ಆಸರೆಯಾಗಿತ್ತು. ಹೊಸ ಯೋಜನೆಯಿಂದ ನಮ್ಮ ಕೂಲಿಯನ್ನೇ ಕಿತ್ತುಕೊಳ್ಳಲು ಹೊರಟಿದ್ದಾರೆ. ಹಳೆಯ ಕಾನೂನನ್ನೇ ಉಳಿಸಬೇಕು. ನಮ್ಮ ಹೊಟ್ಟೆಯ ಮೇಲೆ ಹೊಡೆಯಬೇಡಿ” ಎಂದು ಮನವಿ ಮಾಡಿದರು.

ನಮ್ಮ ಬಡವರ ಅನ್ನದ ಮೇಲೆ ಕೈ ಹಾಕಿದ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ” ಎಂದು ಕೂಲಿಕಾರ್ಮಿಕರು ಘೋಷಣೆ ಕೂಗುತ್ತಾ ತಮ್ಮ ನೋವು–ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಕೂಸ್ ಸಂಘಟನೆಯ ವಿಶ್ವೇಶ್ವರಯ್ಯ ಹಿರೇಮಠ, ಅಶೋಕ,ಅನಿತಾ, ಸುರೇಖಾ, ದುರ್ಗಪ್ಪ ಭಂಡಿವಡ್ಡರ, ಹಾಗೂ ಮಹಿಳಾ ಜಾಗೃತ ಸಂಘಟನೆಯ ಶಾರದಾ ಫೂಜಾ, ಸುವರ್ಣಾ ಕುಟ್ಟಾಳೆ .ಗಾಣಗಿ ಸೇರಿದಂತೆ ಹಲವು ಮುಖಂಡರು ಮಾತನಾಡಿ, ಬಡ ಕಾರ್ಮಿಕರ ಬದುಕನ್ನು ಕಸಿದುಕೊಳ್ಳುವ ಕೇಂದ್ರ ಸರ್ಕಾರದ ನೀತಿಯನ್ನು ತೀವ್ರವಾಗಿ ಖಂಡಿಸಿದರು.




