ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಬಳ್ಳಾರಿ ಹಾಗೂ ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ ಸಹಯೋಗದೊಂದಿಗೆ ನವೆಂಬರ್ 22, 23ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಬಳ್ಳಾರಿ ಜಿಲ್ಲಾ ಅಧ್ಯಕ್ಷೆ ಶಾಂತಾಬಾಯಿ ಕಟ್ಟಿಮನಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, “ಈ ಕ್ರೀಡಾಕೂಟದಲ್ಲಿ 30 ವರ್ಷದ ವಯಸ್ಸಿನಿಂದ ನೂರು ವರ್ಷ ವಯಸ್ಸಿನ ಕ್ರೀಡಾಪಟುಗಳು ಭಾಗವಹಿಸಬಹುದು. ಐದು ವಿಭಾಗಗಳಲ್ಲಿ ಈ ಕ್ರೀಡಾಕೂಟವನ್ನು ನಡೆಸಲಾಗುತ್ತಿದ್ದು 100 ಮೀಟರ್ ನಿಂದ 500 ಮೀಟರ್ ಓಟದ ಸ್ಪರ್ಧೆಗಳು, ಎಸೆತ ಹಾಗೂ ಜಿಗಿತದ ಸ್ಪರ್ಧೆಗಳು ಇರಲಿವೆ. 65 ವರ್ಷ ವಯಸ್ಸಿನ ಸ್ಪರ್ಧಾಳುಗಳಿಗೆ ಕೆಲವು ಆಟಗಳನ್ನು ನಿಷೇಧಿಸಲಾಗಿದೆ, ವಿಕಲಚೇತನರಿಗೆ ಸಹ ಈ ಕ್ರೀಡಾಕೂಟದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ” ಎಂದು ತಿಳಿಸಿದರು.
“ಪ್ರತಿಸ್ಪರ್ಧೆಯಲ್ಲೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಗೆದ್ದವರಿಗೆ ಡಿಸೆಂಬರ್ 13 ಮತ್ತು 14ರಂದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆಯುವ ದಕ್ಷಿಣ ಭಾರತದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬಳ್ಳಾರಿ | ನ.19ರವರೆಗೆ ಅಗ್ನಿವೀರ್ ನೇಮಕಾತಿ ರ್ಯಾಲಿ
“ಕ್ರೀಡಾಕೂಟವನ್ನು ಸುಮಾರು 60 ರಿಂದ 70 ಜನ ತೀರ್ಪುಗಾರರು ಭಾಗವಹಿಸಿ ಯಶಸ್ವಿಗೊಳಿಸಲಿದ್ದಾರೆ. ರಾಜ್ಯ ಮತ್ತು ಜಿಲ್ಲಾ ಘಟಕದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್ನ ರಾಜ್ಯಾಧ್ಯಕ್ಷ ವೇಣುಗೋಪಾಲ್, ಖಜಾಂಚಿ ಡಿ ಎಸ್ ದೊಡ್ಡಯ್ಯ, ಜನರಲ್ ಸೆಕ್ರೆಟರಿ ನಾಗಭೂಷಣ್, ವಿಜಯ್, ಅಬ್ದುಲ್ ಮುನಾಫ್ ಇದ್ದರು.





