ಬಳ್ಳಾರಿ ನಗರದ ಮೈಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ದಲಿತ ವಿದ್ಯಾರ್ಥಿ ಮೇಲೆ ಹಾಸ್ಟೆಲ್ನ ವಾರ್ಡನ್ ಮತ್ತು ವಾಚ್ಮನ್ ನಿರಂತರವಾಗಿ ಹಲ್ಲೆ ಮತ್ತು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇಬ್ಬರು ಆರೋಪಿಗಳ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ವೈ.ಎಸ್ ದಿವಾಕರ್ ಮೇಲೆ ಕಳೆದ ಆರು ತಿಂಗಳಿಂದ ವಾರ್ಡನ್ ರುದ್ರಚಾರ್ಯ ಮತ್ತು ವಾಚ್ಮೆನ್ ಮನೋಹರ್ ಪಟೇಲ್ ಹಲ್ಲೆ ನಡೆಸುತ್ತಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಇಬ್ಬರು ಆರೋಪಿಗಳ ವಿರುದ್ಧ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 323, 324, 504, 506 ಹಾಗೂ ಎಸ್ಟಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(r), 3(1)(S), 3(2)(v-A) ಅಡಿ ಎಫ್ಐಆರ್ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಮಾತನಾಡಿರುವ ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷ ರಘು ಸಿ, “ಹಳ್ಳಿಗಳಲ್ಲಿ ಅಸ್ಪೃಶ್ಯತೆ ಅನುಭವಿಸುತ್ತಿರುವ ಕಾಲಘಟ್ಟದಲ್ಲಿಯೂ ಹಳ್ಳಿಯಿಂದ ನಗರಕ್ಕೆ ಮಕ್ಕಳ ಉನ್ನತ ವಿದ್ಯಾಭ್ಯಾಸ ಕನಸು ಇಟ್ಟುಕೊಂಡು ಬರುತ್ತಾರೆ. ಅವರು ಪೋಷಕರು ನಗರಗಳಲ್ಲಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂಬ ಆಸೆಯಿಂದ ನಗರಗಳಿಗೆ ಕಳಿಸುತ್ತಾರೆ. ಆದರೆ, ನಗರಗಳ ಹಾಸ್ಟೆಲ್ಗಳು ಹಾಗೂ ಇನ್ನಿತರ ಪ್ರದೇಶಗಳಲ್ಲೂ ಜಾತೀಯತೆ ನಡೆಯುವುದು ಆಘಾತಕರ” ಎಂದಿದ್ದಾರೆ.




