ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು, ಮಾನಸಿಕ ಒತ್ತಡ ನಿವಾರಿಸಿಕೊಳ್ಳಲು ಸಾಮಾಜಿಕ ಸಂವಹನ ಬೆಳೆಸಿಕೊಳ್ಳಬೇಕು ಎಂದು ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಹಾಗೂ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್ ಹೊಸಮನೆ ಸಲಹೆ ನೀಡಿದರು.
ಜಿಲ್ಲಾಡಳಿತ, ವಿವಿಧ ಸರಕಾರಿ ಇಲಾಖೆಗಳ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗಳ ಸಹಭಾಗಿತ್ವದಲ್ಲಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಇತ್ತೀಚಿನ ದಿನಗಳಲ್ಲಿ ಅಧಿಕ ಕೆಲಸದೊತ್ತಡದಿಂದ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಬಿಡುವಿನ ವೇಳೆಯಲ್ಲಿ ಮಾನಸಿಕ ಆರೋಗ್ಯ ಕಾಪಾಡಲು ಯೋಗ, ಧ್ಯಾನ, ಪ್ರಾಣಾಯಾಮದಂತಹ ಚಟುವಟಿಕೆಗಳನ್ನು ನಾವು ಅಳವಡಿಸಿಕೊಳ್ಳಬೇಕು. ಮಾನಸಿಕ ಒತ್ತಡ ಎಂಬುದು ದೌರ್ಬಲ್ಯ ಅಲ್ಲ. ಊಹೆ, ಅಲೋಚನೆ ಮಾಡುವುದನ್ನು ಬಿಡಬೇಕು. ಇತರರೊಂದಿಗೆ ಮಾತುಕತೆ, ಸಂವಹನದ ವಿಚಾರಗಳ ಮೂಲಕ ಮಾನಸಿಕ ಒತ್ತಡಗಳನ್ನು ತಡೆಗಟ್ಟಬಹುದು” ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಮಾತನಾಡಿ, “ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಪ್ರತಿನಿತ್ಯ ಸಮಸ್ಯೆಗಳನ್ನು ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಮುಕ್ತವಾಗಿ ಚರ್ಚಿಸುವ ಮೂಲಕ ಒತ್ತಡಗಳಿಂದ ಹೊರ ಬರಬಹುದು” ಎಂದು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್ ಬಸರೆಡ್ಡಿ ಮಾತನಾಡಿ, “ಮಾನಸಿಕವಾಗಿ ಒತ್ತಡಕ್ಕೆ ಒಳಗಾದವರು ದೈಹಿಕ, ಮಾನಸಿಕ, ಆರ್ಥಿಕ, ಸಾಮಾಜಿಕ, ಆತ್ಮಹತ್ಯೆ ಆಲೋಚನೆಗಳಿಂದ ಮನಸ್ಸನ್ನು ನಿಯಂತ್ರಣದಲ್ಲಿಡಬೇಕು. ಮಾನಸಿಕ ಆರೋಗ್ಯವು ಕುಟುಂಬದ ಅನುವಂಶಿಕತೆಯಿಂದಲೂ ಬರುತ್ತದೆ. ಮಾನಸಿಕ ಸಮಸ್ಯೆಗೆ ಜವಾಬ್ದಾರಿಯಿಂದ ಚಿಕಿತ್ಸೆ ನೀಡಿದರೆ ಅವರು ಗುಣಮುಖರಾಗುತ್ತಾರೆ” ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಮನೋರೋಗ ತಜ್ಞ ಡಾ. ನಂದ ಕಿಶೋರ್ ಮಾತನಾಡಿ, “ಮನುಷ್ಯ ದೈಹಿಕ ಆರೋಗ್ಯಕ್ಕೆ ನೀಡಿದಷ್ಟು ಪ್ರಾತಿನಿಧ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು. ಪಂಚೇಂದ್ರಿಯಗಳಿಂದ ಮೆದುಳು ಮತ್ತು ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಬೇಕು. ವ್ಯಕ್ತಿತ್ವ ಬದಲಾವಣೆ ಮತ್ತು ಬೆಳವಣಿಗೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಕೆಲಸದ ಸ್ಥಳ ಮತ್ತು ಕೌಟುಂಬಿಕ ಒಡನಾಟದಲ್ಲಿ ಸ್ಮಾರ್ಟ್ಫೋನ್ಗಳು ಸದ್ದಿಲ್ಲದೆ ಮನುಷ್ಯರ ಮೇಲೆ ಒತ್ತಡ ಹೆಚ್ಚಿಸುತ್ತಿವೆ. ವಾರಕ್ಕೊಂದು ದಿನ ಮೊಬೈಲ್ ಬಳಕೆ ನಿಲ್ಲಿಸಿದಲ್ಲಿ ಮಾನಸಿಕ ಆರೋಗ್ಯ ಸುಧಾರಣೆಯಾಗುತ್ತದೆ” ಎಂದು ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ | ವಿಶ್ವ ಸಾಹಿತ್ಯಕ್ಕೆ ಕನ್ನಡಿಗರ ಕೊಡುಗೆ ಅಪಾರ: ವಿವಿ ಕುಲಪತಿ ಪ್ರೊ ಶಾಂತನಾಯಕ್
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ವೀರೇಂದ್ರ ಕುಮಾರ್ ಮಾತನಾಡಿ, “25-30 ಪ್ರತಿಶತ ಜನ ದೇಶದಲ್ಲಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾರೆ. 15-25 ವಯೋಮಾನದವರಲ್ಲೇ ಈ ವ್ಯಾಧಿ ಹೆಚ್ಚು. ಇದರಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಡೆಗಟ್ಟಲು ಟೆಲಿ ಸಹಾಯವಾಣಿ 14416 ಪ್ರಾರಂಭಿಸಿದೆ. ಸಹಾಯವಾಣಿಯು 24 ಗಂಟೆ ಕಾರ್ಯ ನಿರ್ವಹಿಸುತ್ತದೆ. ಸಮಸ್ಯೆ ಇದ್ದವರು ಸಹಾಯ ಪಡೆದುಕೊಳ್ಳಿ” ಎಂದು ಹೇಳಿದರು.
ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ದೂಪಂ ಸತೀಶ್ ಮಾತನಾಡಿ, “ಮಾನಸಿಕ ಆರೋಗ್ಯ ಹಿಡಿತದಿಂದ ಒತ್ತಡಗಳನ್ನು ನಿವಾರಣೆ ಮಾಡಬೇಕು. ಮಕ್ಕಳಿಗೆ ಮಾನಸಿಕ ಆರೋಗ್ಯದ ಮತ್ತು ಅವುಗಳ ಕುರಿತ ಉದ್ಯೋಗಾವಕಾಶಗಳಿಗೆ ದಾರಿ ಮಾಡಿಕೊಡುವ ಉದ್ದೇಶವಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ, ಸುಮಂಗಳಮ್ಮ ವಿದ್ಯಾಲಯದ ಸಂಯೋಜಕಿ ಡಾ. ಸೈಯದಾ ಕೆ ತನ್ವೇರ್, ಫಾತಿಮಾ, ವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.





