ಅಲೆಮಾರಿ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ಆದ ಅನ್ಯಾಯವನ್ನು ಸರಿಪಡಿಸುವಂತೆ ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ರಾಜ್ಯ ಹಾಗೂ ದೇಶದಿಂದ ಸಾವಿರಾರು ಅಲೆಮಾರಿ ಸಮುದಾಯದವರಿಂದ ಅಕ್ಟೋಬರ್ 2ರಂದು ‘ಬುತ್ತಿ ಕಟ್ಟಿ ದೆಹಲಿಗೆ ಹತ್ತಿ’ ಎಂಬ ದೆಹಲಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಲೆಮಾರಿ ಸಮುದಾಯಗಳ ಒಕ್ಕೂಟದ ಮುಖಂಡ ಶಿವಕುಮಾರ್ ತಿಳಿಸಿದರು.
ಬಳ್ಳಾರಿ ನಗರದ ಬಾಲ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಲೆಮಾರಿ ಸಮುದಾಯಗಳು ಅಂತಿಮ ಭರವಸೆಯೊಂದಿಗೆ ಗಾಂಧಿ ಜಯಂತಿಯಂದು, ‘ದೆಹಲಿ ಚಲೋʼ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಈ ಕಾರ್ಯಕ್ರಮದ ಸ್ಥಳಕ್ಕೆ ಕೇಂದ್ರ ಸರ್ಕಾರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಆಹ್ವಾನಿಸಲಾಗುವುದು. ರಾಹುಲ್ ಗಾಂಧಿಯವರು ಸಂವಿಧಾನವನ್ನು ಯಾವಾಗಲೂ ಕೈಯಲ್ಲಿ ಹಿಡಿದುಕೊಂಡು ತಿರುಗುತ್ತಾರೆ. ಸಂವಿಧಾನದ ಪ್ರಕಾರ ಮತ್ತು ನಾಗಮೋಹನ್ ದಾಸ್ ವರದಿಯ ಪ್ರಕಾರ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇಕಡ ಒಂದರಷ್ಟು ಮೀಸಲಾತಿಯನ್ನು ಜಾರಿಗೊಳಿಸಬೇಕು. ಅಲೆಮಾರಿಗಳು ಬೋವಿ, ಲಂಬಾಣಿ, ಹಾಗೂ ಕೊರಚ ಕೊರಮ ಮುಂದುವರೆದ ಜಾತಿಗಳ ಜೊತೆ ಸ್ಪರ್ಧಿಸಲು ಆಗುವುದಿಲ್ಲ. ಪ್ರತ್ಯೇಕವಾಗಿ ನಮಗೆ ಶೇಕಡ ಒಂದರಷ್ಟು ಮೀಸಲಾತಿಯನ್ನು ನೀಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ರಾಹುಲ್ ಗಾಂಧಿ ಅವರಲ್ಲಿ ಮನವಿ ಮಾಡಲಾಗುವುದು” ಎಂದರು.
“ಕರ್ನಾಟಕ ಸರ್ಕಾರ ನಿವೃತ್ತ ನ್ಯಾಯಧೀಶರಾದ ಡಾ. ನಾಗಮೋಹನ್ ದಾಸ್ ಏಕಸದಸ್ಯ ಸಮಿತಿಯನ್ನು ನೇಮಿಸಿತು. ಈ ಆಯೋಗವು ಬಹಳ ವೈಜ್ಞಾನಿಕವಾಗಿ ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ದತ್ತಾಂಶಗಳನ್ನು ಸಂಗ್ರಹಿಸಿ. ಒಂದು ವಸ್ತುನಿಷ್ಟವಾದ ವರದಿಯನ್ನು ಸರಕಾರಕ್ಕೆ ನೀಡಿತು. ಸಾಮಾಜಿಕ ನ್ಯಾಯ ಮತ್ತು ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಶಯಗಳನ್ನು ಇಟ್ಟುಕೊಂಡು ವೈಜ್ಞಾನಿಕವಾದ ವರದಿಯನ್ನು ಸಿದ್ಧಪಡಿಸಿದ್ದರು. ಅದನ್ನಾಧರಿಸಿ 2025ರ ಆಗಸ್ಟ್ 19 ರಂದು ನಡೆದ ಮಂತ್ರಿಮಂಡಲದ ಸಭೆಯಲ್ಲಿ ಈ ವರದಿಯನ್ನು ಕರ್ನಾಟಕ ಸರಕಾರ ಅಂಗೀಕರಿಸಿತು. 49 ಅಲೆಮಾರಿ ಸಮುದಾಯಗಳು ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿಗಳನ್ನು ಒಳಗೊಂಡಂತೆ 59 ಸಮುದಾಯಗಳಿಗೆ ಶೇ 1 ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದೆ. 59 ಸಮುದಾಯಗಳನ್ನು ಸಿ ಗುಂಪಿನ ಬಲಾಡ್ಯ ಸ್ಪ್ರಶ್ಯ ಸಮುದಾಯಗಳ ಜೊತೆಗೆ ಸೇರಿಸಿದೆ. ಈ ಬಲಾಡ್ಯ ಜಾತಿಗಳ ಜೊತೆಗೆ ಈ ಚಿಕ್ಕಚಿಕ್ಕ ಸಮುದಾಯಗಳನ್ನು ಸೇರಿಸಿರುವುದು ಭಾರತದ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿಗೆ ಸಂಬಂಧಿಸಿದಂತೆ ನೀಡಿದ ತೀರ್ಪಿಗೆ ವಿರುದ್ಧವಾಗಿದೆ” ಎಂದು ಆರೋಪಿಸಿದರು.
ಇದನ್ನೂ ಓದಿ: ಬಳ್ಳಾರಿ | ಸರ್ಕಾರ ಮಕ್ಕಳ ಕಾನೂನಾತ್ಮಕ ಹಕ್ಕುಗಳ ರಕ್ಷಕ: ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್
“ಅಲೆಮಾರಿ/ಅರೆಅಲೆಮಾರಿ ಪರವಾಗಿ ಯಾವ ರಾಜಕೀಯ ಲಾಬಿಯೂ ಇಲ್ಲ. ನಮಗೆ ನ್ಯಾಯ ದೊರಕಿಸಿ ಕೊಡುವಂತೆ ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಧರಣಿ ಕೈಗೊಳ್ಳುತ್ತಿದ್ದೇವೆ. ಜೊತೆಗೆ, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಉದ್ದೇಶಿಸಿದ್ದೇವೆ. ಕಾಂಗ್ರೆಸ್ ಹೈಕಮಾಂಡ್ ನಮ್ಮ ನೋವನ್ನು ಆಲಿಸಿ ನ್ಯಾಯವನ್ನು ಕೊಡಬೇಕೆಂದು ಕಾಂಗ್ರೆಸ್ನ ಈ ಮುಖಂಡರಲ್ಲಿ ನಾವು ಮನವಿ ಮಾಡಿಕೊಳ್ಳಲಿದ್ದೇವೆ. ಬೀದಿಯಲ್ಲಿ ಮತ್ತು ಬೆಂಗಳೂರಿನಲ್ಲಿ ಸಿಗದ ನ್ಯಾಯವನ್ನು ಅರಸುತ್ತಾ ದೆಹಲಿಗೆ ಬರುತ್ತಿದ್ದೇವೆ. ನಿರಾಶೆಗೊಳಿಸುವುದಿಲ್ಲ ಎಂಬ ಭರವಸೆಯೂ ಇದೆ ನಿರಾಶಗೊಳಿಸಬೇಡಿ” ಎಂದು ಮನವಿ ಮಾಡಿದರು.
ಪ್ರಜಾ ಪರಿವರ್ತನೆ ವೇದಿಕೆಯ ಜಿಲ್ಲಾಧ್ಯಕ್ಷ ಆನಂದ್ ಕುಮಾರ್. ಸಿಳ್ಳೆಕ್ಯಾತ ಸಮುದಾಯದ ಸುಬ್ಬಣ್ಣ, ಗಂಗಾಧರ, ಜಂಬಣ್ಣ, ರಾಮಾಂಜಿನಿ, ಸಂಪತ್ ಕುಮಾರ್, ಸೇರಿದಂತೆ ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಪ್ರಮುಖರು ಇದ್ದರು.





