ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ಶಿಶು ಸಾವನಪ್ಪಿರುವ ಘಟನೆ ಬಳ್ಳಾರಿ ಕಂಪ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಆರೋಪಿ ವೈದ್ಯ ಹಾಗೂ ದಾದಿಯನ್ನು ವರ್ಗಾವಣೆ ಮಾಡಲಾಗಿದೆ. ತಾಲೂಕಿನ ರಾಮಸಾಗರ ಗ್ರಾಮದ ನಿವಾಸಿ ಚಂದ್ರಮ್ಮ (28) ಮೃತ ಬಾಣಂತಿ.
ಏನಿದು ಘಟನೆ: ರಾಮಸಾಗರ ಗ್ರಾಮದ ಚಂದ್ರಮ್ಮ ಸೆ. 25ರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡದ್ದರಿಂದ ತವರು ಮನೆ ಬೆಳಗೋಡಹಾಳದಿಂದ ಕಂಪ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ತಜ್ಞ ವೈದ್ಯರು ಇಲ್ಲದ ಕಾರಣ ಅಲ್ಲಿನ ದಾದಿ ಗರ್ಭಿಣಿಯನ್ನು ದಾಖಲಿಸಿಕೊಂಡು ಪರೀಕ್ಷೆ ನಡೆಸಿದ್ದಾರೆ. ನಂತರ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿ ರಿಪೋರ್ಟ್ ತಂದು ತೋರಿಸಿದ ಮೇಲೆ ವೈದ್ಯರು ಇದರಲ್ಲಿ ಮಗು ಚೆನ್ನಾಗಿದೆ ಮತ್ತು ನಾರ್ಮಲ್ ಡೆಲಿವರಿಯಾಗಲಿದೆ ಎಂದು ಹೇಳಿದ್ದಾರೆ. ಸಂಜೆವರೆಗೂ ಗರ್ಭಿಣಿ ಕಡೆಗೆ ಗಮನ ಹರಿಸಿಲ್ಲ. ನಂತರ ಹೆರಿಗೆಗೆ ಕರೆದುಕೊಂಡು ಹೋಗಿ ಸಂಜೆ ಹೆರಿಗೆ ಮಾಡಿಸಿದಾಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗು ಸಾವನ್ನಪ್ಪಿದೆ.
ಮಗು ಜನಿಸಿದಾಗಲೇ ಸಾವನ್ನಪ್ಪಿತ್ತು. ಆದರೆ, ವೈದ್ಯರು ಮಗುವನ್ನು ಕೆಲ ಹೊತ್ತು ಐಸಿಯುನಲ್ಲಿ ಇರಿಸಿ, ನಂತರ ‘ಮಗುವಿನ ಉಸಿರಾಟ ಇಲ್ಲ’ ಎಂದು ಕುಟುಂಬಸ್ತರನ್ನು ಕರೆಸಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಬಾಣಂತಿ ಕಡೆಗೆ ಗಮನ ಹರಿಸದ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ತೀವ್ರ ರಕ್ತಸ್ರಾವದಿಂದ ನರಳುವಂತಾಗಿದೆ. ಇನ್ನೇನು ಬಾಣಂತಿಯು ಬದುಕುವುದಿಲ್ಲ ಎಂಬುದು ಅರಿವಿಗೆ ಬಂದಾಗ ಕೇಂದ್ರದ ವೈದ್ಯರು ರಾತ್ರಿ 8ಗಂಟೆ ಸುಮಾರಿಗೆ ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ | ಸರ್ಕಾರ ಮಕ್ಕಳ ಕಾನೂನಾತ್ಮಕ ಹಕ್ಕುಗಳ ರಕ್ಷಕ: ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್
ಕಂಪ್ಲಿಯಿಂದ ಬಳ್ಳಾರಿ ಬಿಮ್ಸ್ಗೆ ರಾತ್ರಿ 9:30ಕ್ಕೆ ದಾಖಲಿಸಿದ ನಂತರ ಬಳ್ಳಾರಿ ಆಸ್ಪತ್ರೆಯ ವೈದ್ಯರು ತಡವಾಗಿ ಬಂದಿದ್ದಕ್ಕೆ ಕುಟುಂಬಸ್ಥರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಕಂಪ್ಲಿಯ ಸಮುದಾಯ ಆರೋಗ್ಯ ಕೇಂದ್ರದ ನಿರ್ಲಕ್ಷ್ಯ ಎಂದು ಬಾಣಂತಿ ಕುಟುಂಬಸ್ಥರು ಹೇಳುತ್ತಿದ್ದಾರೆ. ನಂತರ ಚಿಕಿತ್ಸೆ ನೀಡಿದರೂ ರಕ್ತಸ್ರಾವ ನಿಲ್ಲದ ಪರಿಣಾಮ ಆಸ್ಪತ್ರೆಯಲ್ಲಿ ಬೆಳಗಿನ ಜಾವ 3:40 ಗಂಟೆಗೆ ಬಾಣಂತಿ ಚಂದ್ರಮ್ಮ ಸಾವನಪ್ಪಿದ್ದಾರೆ.
ಕಂಪ್ಲಿ ಶಾಸಕ ಜೆ.ಎನ್.ಗಣೇಶ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ-ಶಿಶು ಸಾವನಪ್ಪರುವ ವಿಷಯ ತಿಳಿದು, ರಾಮಸಾಗರದ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಜತೆಗೆ ನಿರ್ಲಕ್ಷ್ಯವಹಿಸಿದ ವೈದ್ಯ ಹಾಗೂ ನರ್ಸ್ಗಳ ವರ್ಗಾವಣೆ ಮಾಡಿಸಿದ್ದಾರೆ.





