ಬಳ್ಳಾರಿ ನಗರದ ಗುಗ್ಗರಹಟ್ಟಿ ಪದೇಶದಲ್ಲಿ ಬುಧವಾರ ರಾತ್ರಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ವಿಚಾರಗಳು ಕಂಡುಬಂದಿಲ್ಲ. ಬದಲಾಗಿ ವೈಯಕ್ತಿಕ ಮನಸ್ತಾಪಗಳಿಂದ ಮೆಹಬೂಬ್ ಬಾಷಾ ಎಂಬಾತನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಳ್ಳಾರಿ ನಗರದ ಗುಗ್ಗರಹಟ್ಟಿ ಪದೇಶದಲ್ಲಿ ಜುಲೈ 19ರಂದು ಮನೆಯ ಹತ್ತಿರ ಸುಮಾರು ನೂರು ಮೀಟರ್ ಅಂತರದಲ್ಲಿ ಮೆಹಬೂಬ್ ಬಾಷಾ ಅಲಿಯಾಸ್ ಕಾರ್ಪೆಂಟರ್ ಬಾಷಾ ಎಂಬ ವ್ಯಕ್ತಿಯ ಹತ್ಯೆಯಾಗಿತ್ತು. ಕೋಳಿ ಅನ್ವರ್, ಅಲ್ತಾಫ್ ಮತ್ತು ಸಿರಾಜ್ ಎಂಬ ಮೂವರು ವ್ಯಕ್ತಿಗಳು ಸೇರಿ ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ ಮಾಡಿದ್ದರು” ಎಂದು ತಿಳಿಸಿದರು.
“ಈ ಘಟನೆಯ ಹಿಂದೆ ಯಾವುದೇ ರಾಜಕೀಯದ ದುರುದ್ದೇಶವಿರುವುದು ಕಂಡು ಬಂದಿಲ್ಲ. ಈ ಹಿಂದೆ ನಾಲ್ವರು ಸೇರಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ವೈಯಕ್ತಿಕ ಮನಸ್ತಾಪಗಳಿಂದ ಎಲ್ಲರೂ ಬೇರೆಯಾಗಿ ವ್ಯವಹಾರ ಮಾಡುತ್ತಿದ್ದರು. ಮೆಹಬೂಬ್ ಬಾಷಾನ ವ್ಯವಹಾರ ಕ್ಷಿಪ್ರಗತಿಯಲ್ಲಿ ಏರುಮುಖವಾದದ್ದನ್ನು ಸಹಿಸದ ದುಷ್ಕರ್ಮಿಗಳು ದ್ವೇಷದಿಂದ ಹತ್ಯೆ ಮಾಡಿದ್ದಾರೆ. ಇವರ ನಡುವೆ ಯಾವುದೇ ರಾಜಕೀಯ ವಿಚಾರ ಕಂಡುಬಂದಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶ್ರೀನಿವಾಸಪುರ l ದಲಿತ ವಿದ್ಯಾರ್ಥಿ ಕೊಲೆ; ಇಬ್ಬರ ಬಂಧನ
“ಮೆಹಬೂಬ್ ಬಾಷಾ ಎಂಬುವವರ ಮಗನ ಹುಟ್ಟುಹಬ್ಬ ಇದ್ದ ಕಾರಣ ಕೇಕ್ ತಂದು ಮನೆಯಲ್ಲಿಟ್ಟು ಹೊರಗಡೆ ಬಂದ ಸಯಮದಲ್ಲಿ ಹೊಂಚಿ ಹಾಕಿ ಕುಳಿತ್ತಿದ್ದ ದುಷ್ಕರ್ಮಿಗಳು ಏಕಾಏಕಿ ಮುಗಿಬಿದ್ದು ಮೊದಲು ಮಚ್ಚಿನಿಂದ ತಲೆಗೆ ಹೊಡೆದಿದ್ದಾರೆ. ಮೆಹಬೂಬ್ ಬಾಷಾ ನೆಲಕ್ಕೆ ಬೀಳುತ್ತಲೇ ಚಾಕುವಿನಿಂದ ಹಲವು ಬಾರಿ ಇರಿದು ಪರಾರಿಯಾಗಿದ್ದಾರೆ. ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಷಾನನ್ನು ಟಾಮಾ ಕೇರ್ ಸೆಂಟರ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೆಹಬೂಬ್ ಬಾಷಾ ಅಂದು ರಾತ್ರಿ 12ಕ್ಕೆ ಮೃತಪಟ್ಟಿದ್ದರು” ಎಂದು ಅವರು ಹೇಳಿದರು.





