ಬಳ್ಳಾರಿಯ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞ ವೈದ್ಯರ ಅಗತ್ಯವಿದ್ದು, ಖಾಯಂ ಆಗಿ ನೇಮಕ ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಕ್ಕೆ ಆಗ್ರಹಿಸಿ ಆಸ್ಪತ್ರೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಗಿದ್ದು, ಬಳ್ಳಾರಿ ಜಿಲ್ಲಾ ವೈದ್ಯಾಧಿಕಾರಿಗಳ ಮನವೊಲಿಕೆಯಿಂದ ಧರಣಿ ಹಿಂಪಡೆದು ನಗರದ ನೋಡಲ್ ವೈದ್ಯಾಧಿಕಾರಿ ಡಾ.ಪೂರ್ಣಿಮಾ ಅವರ ಮೂಲಕ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಭೂಮಿ ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ರಾಜ್ಯ ಸಂಚಾಲಕ ಕರಿಯಪ್ಪ ಗುಡಿಮನಿ ಮಾತನಾಡಿ, “ಜನರ ಜೀವನ ಆರೋಗ್ಯ ಮಟ್ಟವನ್ನು ಹೆಚ್ಚಿಸಲು ಹಾಗೂ ದೈಹಿಕ ಹಾಗೂ ಯೋಗ ಕ್ಷೇಮ ಸುಧಾರಿಸಬೇಕಾದ ಆರೋಗ್ಯ ಸೇವೆಗಳು ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವ್ಯತಿರಿಕ್ತವಾಗಿವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಿಂದ ಸಾಮಾನ್ಯ ಹಾಗೂ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಆರೋಗ್ಯ ಸೇವೆಗಳ ಸಮಾನ ಲಭ್ಯತೆಯನ್ನು ದೃಢಪಡಿಸುವ ಅಥವಾ ಖಾತ್ರಿ ಪಡಿಸುವ ಬದಲು ನಗರದ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಯು ಆತಂಕದ ವಾತಾವರಣವನ್ನು ಸೃಷ್ಟಿಸಿದೆ” ಎಂದು ಕಳವಲ ವ್ಯಕ್ತಪಡಿಸಿದರು.
ಪ್ರಗತಿಪರ ಹೋರಾಟ ಸಮಿತಿಯ ಸಂಚಾಲಕ ಕೆ ಲಕ್ಷ್ಮಣ ಮಾತನಾಡಿ, “ಗರ್ಭಿಣಿ ಮಹಿಳೆಯರ ಪ್ರಸವಪೂರ್ವ ಮತ್ತು ಪ್ರಸವ ನಂತರದ ಆರೈಕೆಗೆ ನೀಡುವ ತುರ್ತು ವೈದ್ಯಕೀಯ ಸೇವೆಗಳು ಸಕಾಲದಲ್ಲಿ ಲಭ್ಯವಾಗದ ಕಾರಣದಿಂದಾಗಿ ತಾಯಿ ಮತ್ತು ಹಸುಗೂಸುಗಳ ಸಾವು, ಕುಟುಂಬಗಳು ನೋವು ಅನುಭವಿಸುತ್ತಿರುವುದು ಆಸ್ಪತ್ರೆಗೆ ಕಳಂಕ. ಇದರಿಂದ, ಸಾರ್ವಜನಿಕ ವಲಯದಲ್ಲಿ ಆಸ್ಪತ್ರೆಯ ವೈದ್ಯ ಹಾಗೂ ಸಿಬ್ಬಂದಿಗಳ ಮೇಲಿರುವ ನಂಬಿಕೆ ಕಮ್ಮಿಯಾಗಿ, ಹೊರ ರೋಗಿ, ಒಳ ರೋಗಿಗಳ ದಾಖಲಾತಿಯು ಗಣನೀಯವಾಗಿ ಕುಸಿಯುವಿಕೆ ಕಂಡು ಬರುತ್ತಿದೆ. ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಖಾಯಂ ತಜ್ಞರನ್ನು ನೇಮಕಮಾಡಬೇಕು” ಎಂದರು.
ಮಂಗಳಮುಖಿ ರಾಜಮ್ಮ ಮಾತನಾಡಿ, “ಹೊರ ಮತ್ತು ಒಳ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದಿರುವುದು, ವಿಷ ಜಂತುಗಳ ಕಡಿತಕ್ಕೊಳಗಾದವರು ಆಸ್ಪತ್ರೆಗೆ ಹೋದಾಗ ಬಾಣಂತಿಯರ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ಹೊರಗಡೆ ಖಾಸಗಿ ಔಷಧಿ ಅಂಗಡಿಗಳಿಗೆ ಬರೆದು ಕೊಡುವಂತದ್ದು, ಹೆರಿಗೆ ಮಾಡಲು ಸಂಬಂಧಿಕರಿಂದ ಸಿಬ್ಬಂದಿಗಳು ಹಣಕ್ಕಾಗಿ ಬೇಡಿಕೆ ಇಡುವಂತ ಆಪಾದನೆಗಳು ಕೇಳಿಬರುತ್ತಿವೆ. ಇದರಿಂದ ರೋಗಿಗಳು ದೂರದೂರದ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತ ಸಂಕಷ್ಟ ಎದುರಾಗಿದೆ. ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಪ್ರಶ್ನೆ ಮಾಡಿದರೆ ಸ್ಪಂದಿಸದೇ ನಿರ್ಲಕ್ಷದ ವರ್ತನೆ ತೋರುತ್ತಾರೆ. ಇಂತಹ ಸಿಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು” ಎಂದು ಹೇಳಿದರು.
ಇದನ್ನೂ ಓದಿ: ಬಳ್ಳಾರಿ | ಭೂಮಿ, ವಸತಿ ಹಕ್ಕುವಂಚಿತ ಹೋರಾಟ ಸಮಿತಿಯಿಂದ ರಾಜ್ಯವ್ಯಾಪಿ ಭೂಮಿ ಸತ್ಯಾಗ್ರಹ
ಹಕ್ಕೊತ್ತಾಯಗಳು: ನುರಿತ ತಜ್ಞ ವೈದ್ಯರನ್ನು ಕಾಲಮಿತಿಯೊಳಗೆ ಖಾಯಂ ಆಗುವಂತೆ ನಿಯೋಜಿಸಬೇಕು. ಅವರಿಗೆ ಅಗತ್ಯವಿರುವ ವಸತಿ ಸೌಲಭ್ಯವನ್ನು ಸಮುದಾಯ ಆರೋಗ್ಯ ಕೇಂದ್ರ ಸ್ಥಾನದಲ್ಲೇ ಒದಗಿಸಬೇಕು. ಗರ್ಭಿಣಿಯರು ಹೆರಿಗೆಗಾಗಿ ಬಂದಾಗ ಸಮರ್ಪಕ ಚಿಕಿತ್ಸೆ ನೀಡಬೇಕು. ಒತ್ತಾಯದ ಸಿಸೇರಿಯನ್ ಹೆರಿಗೆಯನ್ನು ತಪ್ಪಿಸಿ, ತುರ್ತು ಸ್ಥಿತಿಯಲ್ಲಿ ಮಾತ್ರ ಸಿಸೇರಿಯನ್ ಚಿಕಿತ್ಸೆ ನಿರ್ವಹಿಸಬೇಕು. ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ಮೇಲ್ಮಟ್ಟದ ಆಸ್ಪತ್ರೆಗೆ 108 ವಾಹನದಲ್ಲೇ ಕಳಿಸಬೇಕು.
ಆಸ್ಪತ್ರೆಯಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರ ಕೊಳೆಯುತ್ತಾ ಬಿದ್ದಿದೆ. ಅದನ್ನು ಮರುಸ್ಥಾಪಿಸಿ ನುರಿತ ತಂತ್ರಜ್ಞರನ್ನು ನೇಮಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ನೀಡತಕ್ಕದ್ದು. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ನಿತ್ಯ ಕ್ಲೋರಿನೇಟೆಡ್ ಸುಣ್ಣದಿಂದ ಹಾಸುನೆಲ, ಮತ್ತು ಮೂತ್ರಾಲಯಗಳನ್ನು ಸ್ವಚ್ಛಗೊಳಿಸಬೇಕು. ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಗಿಗಳ ಒತ್ತಡವನ್ನು ತಪ್ಪಿಸಲು, ನಿರ್ಮಾಣ ಹಂತದಲ್ಲಿರುವ ತಾಲೂಕು ಆಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಸಜ್ಜುಗೊಳಿಸಬೇಕು ಹಾಗೂ ಹಲವು ವರ್ಷಗಳಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಠಿಕಾಣಿ ಹೂಡಿರುವ ಕೆಲವು ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾಯಿಸಬೇಕು. ಸಾರ್ವಜನಿಕ ಹಿತಾಸಕ್ತಿಯನ್ನು ಅರಿತು ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ಇಲ್ಲವೆಂದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂಬಿತ್ಯಾದಿ ಹಕ್ಕೊತ್ತಾಯ ಮಂಡಿಸಿದರು.
ಈ ವೇಳೆ ವಸಂತರಾಜ ಕಹಳೆ, ಸಣಾಪುರ ಮರಿಸ್ವಾಮಿ, ರವಿ ಮಣ್ಣೂರು, ಸಣ್ಣೆಪ್ಪ ತಳವಾರ್, ಸಿ ಬಸವರಾಜ್, ಎಚ್ ಬಸಪ್ಪ, ಸಿ ಹುಸೇನಪ್ಪ, ಕೆ ಮೆಹಬೂಬ್, ಎಚ್ ಶ್ರೀನಿವಾಸ, ಕೆ ದುರುಗೇಶ ಬರಗೂರು, ಪುರುಷೋತ್ತಮ ಸುಗ್ಗನಹಳ್ಳಿ, ಎನ್ ರಾಜಾಭಕ್ಷಿ, ಶೋಭಾರಾಂಪುರ, ಶಿವಗಂಗಮ್ಮ, ಗಂಗಾವತಿಯ ಯನಮೂರ, ಅಜಯ್, ತೃತಿಯಲಿಂಗಿ ರಾಜಮ್ಮ ಮತ್ತು, ಡಾ. ಜಿಅರುಣ್, ಡಾ. ವೀರೇಶ್, ಡಾ. ಸಾಗರ್ ಭರಮಕ್ಕನವರ್, ಡಾ. ಎನ್ ಸುರೇಶಕುಮಾರ್, ಪಿ ಬಸವರಾಜ, ವಿರುಪಾಕ್ಷಿ, ವಿವಿಧ ಸಂಘಟನೆಗಳು ಹಾಗೂ ಇತರರು ಉಪಸ್ಥಿತರಿದ್ದರು.





