ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಅಲ್ಪಸಂಖ್ಯಾತ ಸಮುದಾಯದ ಅಮಾಯಕ ವಿದ್ಯಾರ್ಥಿಗೆ ಮತ್ತೊಂದು ಧರ್ಮದ ಸಹಪಾಠಿಯಿಂದ ಕೆನ್ನೆಗೆ ಹೊಡೆಸಿದ್ದಾರೆ. ನಾಗರಿಕ ಸಮಾಜದಲ್ಲಿ ಈ ರೀತಿಯ ಕೃತ್ಯ ನಡೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಎಐಡಿಎಸ್ಒ ಹೇಳಿದೆ.
ಘಟನೆಯಲ್ಲಿ ಖಂಡಿಸಿ ಎಐಡಿಎಸ್ಒ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. “ಉತ್ತರಪ್ರದೇಶದಲ್ಲಿ ಬೆಳೆಯುತ್ತಿರುವ ಜಾತಿ-ಧರ್ಮ, ದ್ವೇಷ ಮತ್ತು ಅಪರಾಧದ ನೀಚ ವಿನ್ಯಾಸಗಳು ಈಗ ರಾಜಕೀಯ ಚಾವಡಿಗಳ ಮೂಲಕ ಶಿಕ್ಷಣ ಮಂದಿರವನ್ನು ತಲುಪಲು ಪ್ರಾರಂಭಿಸಿವೆ. ಇದಕ್ಕೆ ಮುಜಾಫರ್ನಗರದ ಅಮಾನುಷ ಘಟನೆ ಸಾಕ್ಷಿಯಾಗಿದೆ. ಇಂತಹ ಅಸಹ್ಯ ದ್ವೇಷದ ರಾಜಕಾರಣ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೇ, ಇಡೀ ದೇಶದ ಶಿಕ್ಷಣ ಸಂಸ್ಥೆಗಳಲ್ಲಿಯೂ ನಡೆಯುತ್ತಿದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ” ಎಂದಿದ್ದಾರೆ.
“ಶಾಲೆಗಳು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದ ನಿರ್ಮಾಪಕರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವು ಪೋಷಕರಂತೆಯೇ ಇರುತ್ತದೆ. ಮಕ್ಕಳಿಗೆ ಬೋಧನೆಯೊಂದಿಗೆ ಮಾನವೀಯತೆ, ಭ್ರಾತೃತ್ವ, ನೈತಿಕತೆ ಬೆಳೆಸುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೇ ಹೊರತು, ಮಕ್ಕಳಲ್ಲಿ ದ್ವೇಷದ ಬೀಜವನ್ನು ಬಿತ್ತುವುದಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಮುಜಾಫರ್ನಗರ ಜಿಲ್ಲೆಯ ಶಿಕ್ಷಕಿ ಮಾಡಿದ ಈ ಕೃತ್ಯ ಅಕ್ಷಮ್ಯವಾದದ್ದಾಗಿದೆ. ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿಬೇಕು. ಸಮಾಜದಲ್ಲಿ ಕೋಮು ಸೌಹಾರ್ದತೆ ಹಾಗೂ ಭಾವೈಕ್ಯತೆಯನ್ನು ಕಾಪಾಡಬೇಕು. ಸಮಾಜದ ಸ್ವಾಸ್ಥ್ಯವನ್ನೇ ನಾಶಮಾಡುವ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.




