ದೀಪಾವಳಿಯ ಎರಡನೇ ದಿನದಲ್ಲಿ ಬೆಂಗಳೂರು ನಗರದ ವಾಯು ಗುಣಮಟ್ಟ ಸೂಚ್ಯಂಕ(AQI) ಕಳೆದ ದೀಪಾವಳಿಗಿಂತ ಶೇ.98ರಷ್ಟು ಉತ್ತಮವಾಗಿದ್ದು, ಸಾಮಾನ್ಯ ದಿನಕ್ಕಿಂತ ಶೇ.7ರಷ್ಟು ಕಡಿಮೆಯಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶಬ್ದ ಮಾಲಿನ್ಯದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(KSPCB) ತಿಳಿಸಿದೆ.
ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆಯಲ್ಲಿರುವ ಮೇಲ್ವಿಚಾರಣಾ ಕೇಂದ್ರಗಳು ಕ್ರಮವಾಗಿ 104 ಮತ್ತು 109 ವಾಯು ಗುಣಮಟ್ಟ ಸೂಚ್ಯಂಕವನ್ನು ವರದಿ ಮಾಡಿದ್ದವು. ಕಳೆದ ವರ್ಷ ದೀಪಾವಳಿಯ ಮೊದಲ ದಿನದಂದು ಹೆಬ್ಬಾಳದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 263, ಹೊಂಬೇಗೌಡ ನಗರ 121, ಸಿಲ್ಕ್ ಬೋರ್ಡ್ ಜಂಕ್ಷನ್ 170, ಮೈಸೂರು ರಸ್ತೆ 122 ಮತ್ತು ಜಯನಗರ 136ಕ್ಕೆ ತಲುಪಿತ್ತು ಎಂದು ಮಾಹಿತಿ ಹೊರಹಾಕಿದೆ.
ದೀಪಾವಳಿ ಪೂರ್ವದ ವಾಯು ಗುಣಮಟ್ಟಕ್ಕೆ ಹೋಲಿಸಿದರೆ ಪೀಣ್ಯದಲ್ಲಿ ವಾಯು ಮಾಲಿನ್ಯವು ಶೇ.52ರಷ್ಟು ಹೆಚ್ಚಾಗಿದೆ. ಆದರೆ ಹೊಸಕೋಟೆ ಮತ್ತು ದಾಸರಹಳ್ಳಿಯಲ್ಲಿಯೂ ಹೆಚ್ಚಿನ ವಾಚನ ದಾಖಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮೈಸೂರು ರಸ್ತೆ, ಹೊಂಬೇಗೌಡ ನಗರ, ಜಯನಗರ, ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿರುವ ನಿಲ್ದಾಣಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಸುಧಾರಣೆ ಕಂಡುಬಂದಿದೆ.
“ಅನೇಕ ನಿವಾಸಿಗಳು ತಮ್ಮ ಊರುಗಳಲ್ಲಿ ದೀಪಾವಳಿ ಆಚರಿಸಲು ಬೆಂಗಳೂರಿನಿಂದ ಹೊರಗೆ ಪ್ರಯಾಣ ಬೆಳೆಸಿದ್ದರಿಂದ, ಸಂಚಾರ ದಟ್ಟಣೆ ಕಡಿಮೆಯಾಗಿ ಗಾಳಿಯ ಗುಣಮಟ್ಟ ಸುಧಾರಿಸಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಭಗತ್ ಸಿಂಗ್ ಆಶಯದಂತೆ ಜನಸಾಮಾನ್ಯರೂ ಹೋರಾಟದ ರಾಜಕೀಯ ಮಾಡಬೇಕು: ರಾಮಾಂಜನಪ್ಪ ಆಲ್ದಳ್ಳಿ
ಮಂಗಳವಾರ ರಾತ್ರಿ ಮತ್ತು ಬುಧವಾರವೂ ಜನರು ಪಟಾಕಿ ಸಿಡಿಸುವುದನ್ನು ಮುಂದುವರೆಸಿದ್ದರಿಂದ ವಾಯುಮಾಲಿನ್ಯದ ಮಟ್ಟ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಕೆಎಸ್ಪಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
100ಕ್ಕಿಂತ ಹೆಚ್ಚಿನ AQI ಮಟ್ಟಗಳು ಅಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಶ್ವಾಸಕೋಶ ಅಥವಾ ಹೃದಯ ಕಾಯಿಲೆ ಇರುವ ವ್ಯಕ್ತಿಗಳಲ್ಲಿ, ಮಕ್ಕಳು ಮತ್ತು ವೃದ್ಧರಲ್ಲಿ ಉಸಿರಾಟದ ತೊಂದರೆಯನ್ನು ಉಂಟುಮಾಡಬಹುದೆಂದು ಹೇಳಿದ್ದಾರೆ.





