ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (KSRTC) ಹೊಸದಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ– ದಾವಣಗೆರೆ ನಡುವಿನ ನೇರ ಫ್ಲೈಬಸ್ (ವೋಲ್ವೋ ಮಲ್ಟಿ ಆಕ್ಸೆಲ್) ಸೇವೆಗೆ ಇಂದು ಬೆಳಗ್ಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ವಿದ್ಯುಕ್ತ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಫ್ಲೈಬಸ್ ಪ್ರಯಾಣಿಕರಿಗೆ ನಂದಿನಿ ಉತ್ಪನ್ನಗಳ ಸ್ನ್ಯಾಕ್ಸ್ ಕಿಟ್ ವಿತರಣಾ ಯೋಜನೆಗೂ ಚಾಲನೆ ನೀಡಲಾಯಿತು.
ಇಂದು ಬೆಳಗ್ಗೆ 10.30ಕ್ಕೆ ಟರ್ಮಿನಲ್–2 ರಿಂದ ಚಾಲನೆ ನೀಡಿ ಮಾತನಾಡಿದ ಅವರು, “ಸಾರ್ವಜನಿಕ ಸಾರಿಗೆಯ ಉತ್ತೇಜನ ನಮ್ಮ ಪ್ರಥಮ ಆದ್ಯತೆ. 2013ರಲ್ಲಿ ನನ್ನ ಮೊದಲ ಅವಧಿಯಲ್ಲಿ ಮೈಸೂರು–ವಿಮಾನ ನಿಲ್ದಾಣ ಮಾರ್ಗದ ಫ್ಲೈಬಸ್ ಸೇವೆ ಆರಂಭಿಸಿದ್ದೆವು. ಬಳಿಕ ಮಡಿಕೇರಿ, ಕುಂದಾಪುರ ಮಾರ್ಗಗಳಿಗೂ ವಿಸ್ತರಿಸಲಾಯಿತು. ಈಗ ದಾವಣಗೆರೆಗೆ ನೇರ ಫ್ಲೈಬಸ್ ಆರಂಭವಾಗುತ್ತಿದೆ. ಜನರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತೆ ಹೊಸ ಉಪಕ್ರಮಗಳು ಮುಂದುವರಿಯುತ್ತವೆ” ಎಂದು ಹೇಳಿದರು.
ಫ್ಲೈಬಸ್ ಸೇವೆಯ ವಿವರಗಳು: ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಫ್ಲೈಬಸ್ ಮಾರ್ಗಗಳು ಒಟ್ಟು 13. ಅದರಲ್ಲಿ ಮೈಸೂರು 9, ಮಡಿಕೇರಿ 2, ಕುಂದಾಪುರ 2 ಮತ್ತು ಇದೀಗ ದಾವಣಗೆರೆ ಮಾರ್ಗವೂ ಸೇರ್ಪಡೆಯಾಗಿದೆ. ದಿನದ ಸರಾಸರಿ 44 ಟ್ರಿಪ್ಗಳು, 10,240 ಕಿಮೀ ಸಂಚಾರ, ಪ್ರತಿ ಕಿಮೀಗೆ ರೂ.90 ಆದಾಯ ಹಾಗೂ 1,050 ಪ್ರಯಾಣಿಕರ ಸರಾಸರಿ ದಾಖಲಾಗಿದೆ.


ಹೊಸ ಮಾರ್ಗ ಮತ್ತು ವೇಳಾಪಟ್ಟಿ: ಬೆಂಗಳೂರು ವಿಮಾನ ನಿಲ್ದಾಣದಿಂದ ದಾವಣಗೆರೆಗೆ ದಿನಕ್ಕೆ ಎರಡು ಟ್ರಿಪ್ಗಳು ನಿಗದಿಯಾಗಿವೆ…
- ಬೆಳಗ್ಗೆ 00.45ಕ್ಕೆ ಹೊರಟು 5.45ಕ್ಕೆ ತಲುಪುವುದು
- ಬೆಳಗ್ಗೆ 10.00ಕ್ಕೆ ಹೊರಟು ಮಧ್ಯಾಹ್ನ 3.00ಕ್ಕೆ ತಲುಪುವುದು
ದಾವಣಗೆರೆಯಿಂದ ವಿಮಾನ ನಿಲ್ದಾಣದತ್ತ-
- ಬೆಳಗ್ಗೆ 8.00ಕ್ಕೆ ಹೊರಟು ಮಧ್ಯಾಹ್ನ 1.00ಕ್ಕೆ ತಲುಪುವುದು
- ಸಂಜೆ 5.00ಕ್ಕೆ ಹೊರಟು ರಾತ್ರಿ 10.00ಕ್ಕೆ ತಲುಪುವುದು
ಮಾರ್ಗವು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮೂಲಕ ದೊಡ್ಡಬಳ್ಳಾಪುರ ಬೈಪಾಸ್, ಡಾಬಸ್ ಪೇಟೆ, ತುಮಕೂರು ಬೈಪಾಸ್ ಹಾಗೂ ಚಿತ್ರದುರ್ಗ ಬೈಪಾಸ್ನಿಂದ ನೇರವಾಗಿ ದಾವಣಗೆರೆಗೆ ಸಾಗುತ್ತದೆ. ತುಮಕೂರು ಮತ್ತು ಚಿತ್ರದುರ್ಗ ಬೈಪಾಸ್ಗಳಲ್ಲಿ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಸೌಲಭ್ಯ ಒದಗಿಸಲಾಗಿದೆ.


ದರ ವಿವರ:
- ತುಮಕೂರು – ₹400
- ಚಿತ್ರದುರ್ಗ – ₹980
- ದಾವಣಗೆರೆ – ₹1,250
ಉಚಿತ ನಂದಿನಿ ಸ್ನ್ಯಾಕ್ಸ್ ಕಿಟ್: ನಂದಿನಿ ಉತ್ಪನ್ನಗಳ ಸ್ನ್ಯಾಕ್ಸ್ ಕಿಟ್ ಅನ್ನು 2025ರ ನವೆಂಬರ್ 15ರಿಂದ ಎಲ್ಲಾ ಫ್ಲೈಬಸ್ ಪ್ರಯಾಣಿಕರಿಗೆ ಉಚಿತವಾಗಿ ವಿತರಿಸಲಾಗುವುದು. ಈ ಕಿಟ್ನಲ್ಲಿ ನೀರಿನ ಬಾಟಲ್, Flavoured Milk, Cookies (ಸಿಹಿ ಮತ್ತು ಖಾರ), ಕೇಕ್ ಹಾಗೂ ಕೋಡುಬಳೆ ಪ್ಯಾಕೆಟ್ ಇರುತ್ತವೆ. ಕಿಟ್ ಹಿಂಬದಿಯಲ್ಲಿ ನಿಗಮದ ಸೇವೆಗಳ ಮಾಹಿತಿ ಮತ್ತು QR ಕೋಡ್ ಅನ್ನು ಟಿಕೆಟ್ ಬುಕ್ಕಿಂಗ್ಗಾಗಿ ಮುದ್ರಿಸಲಾಗಿದೆ. ಪ್ರಯಾಣಿಕರು ಈ ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಸುಧಾರಣೆಯಾಗಬೇಕಾದದ್ದು ಜೈಲುಗಳೋ, ರಾಜ್ಯ ಸರ್ಕಾರವೋ?
ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ನಿರ್ದೇಶಕಿ (ಸಿಬ್ಬಂದಿ ಮತ್ತು ಜಾಗೃತ) ಡಾ. ಕೆ ನಂದಿನಿ ದೇವಿ, ಮಾಹಿತಿ ತಂತ್ರಜ್ಞಾನ ನಿರ್ದೇಶಕ ಇಬ್ರಾಹಿಂ ಮೈಗೂರ, ಮುಖ್ಯ ವಾಣಿಜ್ಯ ಅಧಿಕಾರಿ ಕೆನೆತ್, KIAL ಉಪಾಧ್ಯಕ್ಷ ಪ್ರವತ್, ವ್ಯವಸ್ಥಾಪಕ ಸಂಜಯ್ ಚಂದ್ರ, KMF ನಿಂದ ಸ್ವಾತಿ ರೆಡ್ಡಿ ಹಾಗೂ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.





