ಬೆಂಗಳೂರು ಪೂರ್ವ ನಗರ ಪಾಲಿಕೆ ಅಪರ ಆಯುಕ್ತ(ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ರವರು ಇಂದು ಆರೋಗ್ಯ ವಿಭಾಗದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ, ಸಭೆಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ಜನನ ಮತ್ತು ಮರಣ ನೋಂದಣಿ, ಇಂದಿರಾ ಕ್ಯಾಂಟೀನ್, ವಸತಿಗೃಹಗಳು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ, ಉದ್ದಿಮೆ ಪರವಾನಗಿ ಕುರಿತಂತೆ ಸಮಗ್ರ ಪ್ರಗತಿ ಪರಿಶೀಲನೆ ನಡೆಸಿದರು.
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅಪರ ಆಯುಕ್ತರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
“ಡೆಂಘಿ ಮುನ್ನೆಚ್ಚರಿಕೆ ಕ್ರಮವಾಗಿ ಲಾರ್ವಾ ಸರ್ವೇ ಮತ್ತು ʼಡ್ರೈ ಡೇʼಯನ್ನು ಕಡ್ಡಾಯವಾಗಿ ನಡೆಸಬೇಕು, ಟಿಬಿ ಕಾಯಿಲೆ ನಿಯಂತ್ರಣಕ್ಕಾಗಿ ಎಲ್ಲ ಆಸ್ಪತ್ರೆಗಳಿಂದ ಮಾಸಿಕ ವರದಿ ಪಡೆದು ನಿಯಮಿತ ಮೇಲ್ವಿಚಾರಣೆ ನಡೆಸಬೇಕು, ಉಚಿತ ಲಸಿಕೆಗಳ ವಿತರಣೆ ಪರಿಣಾಮಕಾರಿಯಾಗಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು, ರೋಗ ವಾಹಕಗಳ ಮೂಲಕ ರೋಗ ಹರಡದಂತೆ ನಿರಂತರ ನಿಗಾವಹಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಂಬಾಕು ನಿಯಂತ್ರಣ
“ಅಂಗಡಿಗಳಲ್ಲಿ ನಿಯಮ ಉಲ್ಲಂಘಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟಲು ದಾಳಿ ನಡೆಸಿ ವಸ್ತುಗಳನ್ನು ಜಪ್ತಿ ಮಾಡಬೇಕು. ಅಲ್ಲದೆ ನಿಯಮಿತ ಮೇಲ್ವಿಚಾರಣೆ ಮಾಡಬೇಕು” ಎಂದು ಹೆಲ್ತ್ ಸೂಪರ್ವೈಸರ್ಗಳಿಗೆ ಸೂಚಿಸಿದರು.
ಜನನ ಮತ್ತು ಮರಣ ನೋಂದಣಿ
“ಜನನ ಮತ್ತು ಮರಣ ಪ್ರಮಾಣ ಪತ್ರ ಸಂಬಂಧ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದಲ್ಲಿ ಯಾವುದೇ ದೂರಿನ ಹಿನ್ನೆಲೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು. ಜತೆಗೆ ಹಿಂದಿನ ಎಲ್ಲ ದಾಖಲೆಗಳ ಡಿಜಿಟಲೀಕರಣ ಕಾರ್ಯ ತ್ವರಿತಗೊಳಿಸುವಂತೆ ನಿರ್ದೇಶಿಸಿದರು.
ಇಂದಿರಾ ಕ್ಯಾಂಟೀನ್
“ನಗರ ಪಾಲಿಕೆ ವ್ಯಾಪ್ತಿಯ 15 ಇಂದಿರಾ ಕ್ಯಾಂಟೀನ್ಗಳಲ್ಲಿ ನೈರ್ಮಲ್ಯ ಕಾಪಾಡುವುದು, ಗುಣಮಟ್ಟದ ಆಹಾರ ಒದಗಿಸುವುದು ಹಾಗೂ ದೈನಂದಿನ ನಿರ್ವಹಣೆಯನ್ನು ಖಚಿತಪಡಿಸಲು ಹೆಲ್ತ್ ಸೂಪರ್ವೈಸರ್ಗಳೇ ನೇರ ಜವಾಬ್ದಾರರಾಗಿರುತ್ತಾರೆ” ಎಂದು ತಿಳಿಸಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ
ಹೋಟೆಲ್, ರೆಸ್ಟ್ರೋಂಟ್ಗಳಲ್ಲಿ ಆಹಾರ ಗುಣಮಟ್ಟ ಹಾಗೂ ನೈರ್ಮಲ್ಯ ಕಾಪಾಡಿಕೊಂಡಿರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ವಸತಿಗೃಹಗಳು
ಪ್ರಮಾಣೀಕೃತ ಮಾರ್ಗಸೂಚಿಯ ಪ್ರಕಾರ ಕಾರ್ಯನಿರ್ವಹಿಸದ ಹಾಗೂ ಉಲ್ಲಂಘನೆ ಮಾಡಿದ ವಸತಿಗೃಹಗಳನ್ನು(ಪಿಜಿ) ತಕ್ಷಣ ಪರಿಶೀಲಿಸಿ ಮುಚ್ಚುವಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಹೋಮ್ ನರ್ಸ್ ಕೆಲಸ ಮಾಡುತ್ತಿದ್ದ ನಾಪತ್ತೆ: ಸುಳಿವು ಸಿಕ್ಕಲ್ಲಿ ಕಂಕನಾಡಿ ನಗರ ಠಾಣೆಗೆ ಸಂಪರ್ಕಿಸುವಂತೆ ಸೂಚನೆ
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ವಾಣಿಜ್ಯ ಚಟುವಟಿಕೆಗಳಿದ್ದರೂ ಪರವಾನಗಿ ಪಡೆದವರ ಸಂಖ್ಯೆ ಕಡಿಮೆ ಇರುವುದರಿಂದ, ಪ್ರಚಾರ ಹಾಗೂ ವಿಶೇಷ ಕ್ಯಾಂಪ್ ಮೂಲಕ ಉದ್ದಿಮೆ ಪರವಾನಗಿ ವಿತರಣೆ ಕಾರ್ಯವನ್ನು ವೇಗಗೊಳಿಸಲು ನಿರ್ದೇಶಿಸಿದರು.
ಸಭೆಯಲ್ಲಿ ಆರೋಗ್ಯಾಧಿಕಾರಿ ಡಾ. ಸವಿತಾ, ಡಾ. ವಿಶ್ವೇಶ್ವರಯ್ಯ, ಡಾ. ರಾಕೇಶ್, ಸಹಾಯಕ ನಿರ್ದೇಶಕರು(ಸಾಂಖ್ಯಿಕ), ಹೆಲ್ತ್ ಸೂಪರ್ವೈಸರ್ಗಳು ಮತ್ತು ಇತರ ಅಧಿಕಾರಿಗಳು ಇದ್ದರು.





