ಮಸೀದಿಗಳ ಕುರಿತಂತೆ ಜನಸಾಮಾನ್ಯರಿಗೆ ಇರುವ ಕುತೂಹಲವನ್ನು ತಣಿಸಲು ಮಸೀದಿ ದರ್ಶನ ಕಾರ್ಯಕ್ರಮವನ್ನು ನಗರದ ಕೆಆರ್ ಪುರಂ ಮೆಟ್ರೋ ರೈಲು ನಿಲ್ದಾಣದ ಬಳಿಯಿರುವ ಮಸ್ಜಿದ್ ಎ ನೂರ್ ಅಲ್ಲಿ ಆಯೋಜಿಸಲಾಗಿತ್ತು.
ಸಾರ್ವಜನಿಕರಲ್ಲಿ ಮಸೀದಿ, ಮುಸ್ಲಿಮರ ಆರಾಧನೆಗಳು, ಕಾರ್ಯ ಚಟುವಟಿಕೆಗಳು ಹಾಗೂ ಮಸ್ಜಿದ್ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಪೂರ್ವಾಗ್ರಹಗಳನ್ನು ನಿವಾರಿಸಿ ಪರಸ್ಪರ ಸೌಹಾರ್ದ, ನಂಬಿಕೆ/ವಿಶ್ವಾಸಗಳನ್ನು ಮೂಡಿಸುವಂತಹ ಒಂದು ಅಪರೂಪದ ಕ್ಷಣಗಳಿಗೆ ಮಸೀದಿ ದರ್ಶನ ಕಾರ್ಯಕ್ರಮವು ಸಾಕ್ಷಿಯಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಸಾರ್ವಜನಿಕರು ಮಸೀದಿ, ನಮಾಜ್ ನ ಕ್ರಮ, ಸಾಮೂಹಿಕ ನಮಾಜ್, ನಮಾಜ್ ಮುಂಚಿತವಾಗಿ ನಿರ್ವಹಿಸುವ ಅಂಗಸ್ನಾನ (ವುಜೂ) ಮಿಂಬರ್ (ಭಾಷಣ ಪೀಠ), ಮೆಹ್ರಾಬ್ (ನಮಾಜ್ ಗೆ ನೇತೃತ್ವ ವಹಿಸುವ ಸ್ಥಳ, ಆಜಾನ್ (ನಮಾಜಗಾಗಿ ಕರೆ), ಮಸೀದಿಯಲ್ಲಿ ನಡೆಯುವ ಸಮಾಜಮುಖಿ ಕಾರ್ಯಕ್ರಮಗಳು ಇತ್ಯಾದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಪರಸ್ಪರರನ್ನು ಅರಿಯುವ, ಹೃದಯಗಳನ್ನು ‘ಸಮುದಾಯಗಳನ್ನು’ ಬೆಸೆಯುವ ಇಂತಹ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ, ಈ ಮೂಲಕ ಕೋಮು ದ್ವೇಷ, ಅಪನಂಬಿಕೆಗಳಿಗೆ ಕಡಿವಾಣ ಹಾಕಿ, ಪರಸ್ಪರ ಬೆರೆಯುವ/ಅರಿಯುವ ಮೂಲಕ ಸಮಾಜ ಮತ್ತು ದೇಶವನ್ನು ಕಟ್ಟುವ ಕೆಲಸವನ್ನು ಈ ಮೂಲಕ ನಡೆಸಲಾಗುತ್ತಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಗವಾಯಿ ಬೌದ್ಧತತ್ವವೂ ಬಿಜೆಪಿಗರ ಮನುವಾದವೂ
ಮಸೀದ್ ಎ ನೂರ್ ಆಡಳಿತದ ಸಮೀತಿಯ ಅಧ್ಯಕ್ಷ ದಾವೂದ್, ಪದಾಧಿಕಾರಿಗಳು, ಜಮಾಅತೆ ಇಸ್ಲಾಮಿ ಹಿಂದ್ ಬೆಂಗಳೂರು ನಗರ ಸಂಚಾಲಕಾದ ಶೇಖ್ ಹಾರೂನ್ ಸಪ್ದರ್, ರಾಜ್ಯ ಕಾರ್ಯದರ್ಶಿ ಮೌಲಾನಾ ಲಬೀದ್ ಶಾಫಿ, ಹೀರಾ ಪೌಂಡೇಶನ್ ಟ್ರಸ್ಟ್ ನ ಮುಖ್ಯಸ್ಥರಾದ ಶಮೀರ್, ಹಂಜಾ ಕುಂಜ್, ಜಮಾಅತ್ ಸದಸ್ಯರಾದ ಮಸೂದ್ ಶರೀಫ್ ಉಪಸ್ಥಿತರಿದ್ದರು.
ಗೈಡ್ ಆಗಿ ಮೊಹಮ್ಮದ್ ನವಾಜ್, ರಂಶೀದ್, ಮೊಹಮ್ಮದ್ ಇಸಾಕ್, ಸಯ್ಯದ್ ಮುರಾದ್, ಮಹಮ್ಮದ್ ಪೀರ್ ಲಟಗೇರಿ ರವರು ಕನ್ನಡ, ಇಂಗ್ಲಿಷ್ ಮತ್ತು ಇತರೆ ಭಾಷೆಗಳಲ್ಲಿ ಮಸೀದಿ ಕುರಿತು ವಿವರಣೆ ನೀಡಿದರು.





