ಮಹಿಳೆಯೊಬ್ಬರಿಗೆ ಸೈಟ್ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದುಕೊಂಡು, ವಾಪಸ್ ಕೇಳಿದಾಗ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮೆಳೆಕೋಟೆಯಲ್ಲಿ ಗುರುಕುಲ ಪೀಠ ನಡೆಸುತ್ತಿರುವ ಬ್ರಹ್ಮಾನಂದ ಗುರೂಪಿ ವಿರುದ್ದ ಮಹಿಳೆಯೊಬ್ಬರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ನನ್ನ ಪತಿ ಸ್ವಾಮೀಜಿಯ ನಿವಾಸದ ಬಳಿಯೇ ವಾಸವಿದ್ದರು. ಆದ್ದರಿಂದ, ನಮಗೆ ಸ್ವಾಮೀಜಿ ಪರಿಚಯವಿತ್ತು. ಇದೇ ಪರಿಚಯದಲ್ಲಿ ತಮಗೆ ಪರಿಚಯ ಇರುವವರಿಂದ ಕಡಿಮೆ ಬೆಲೆಗೆ ನಿವೇಶನ ಕೊಡಿಸುತ್ತೇನೆಂದು ಸ್ವಾಮೀಜಿ ತಮ್ಮ ಬಳಿ 5 ಲಕ್ಷ ರೂ. ಹಣ ಪಡೆದುಕೊಂಡಿದ್ದರು. ಆದರೆ, ಸೈಟ್ ಕೊಡಿಸಿಲಿಲ್ಲ. ಹೀಗಾಗಿ, ಹಣ ವಾಪಸ್ ಕೇಳಿದಾಗ, ‘ಹಣ ಬೇಕೆಂದರೆ ನನ್ನ ರೂಮ್ಗೆ ಬಾ. ನಿಮಗೆ ಹಣ ಬೇಕು. ನನಗೆ ಮಜಾ ಬೇಕು’ ಎಂದು ಲೈಂಗಿಕ ಕುರುಕುಳ ನೀಡಿದ್ದಾರೆ” ಎಂದು ಮಹಿಳೆ ಆರೋಪಿಸಿದ್ದಾರೆ.
“13 ಲಕ್ಷ ರೂ. ಮೌಲ್ಯದ ಸೈಟ್ಅನ್ನು 12 ಲಕ್ಷ ರೂ.ಗಳಿಗೆ ಕೊಡಿಸುತ್ತೇನೆಂದು ಸ್ವಾಮೀಜಿ ಭರವಸೆ ನೀಡಿದ್ದರು. ಆದರೆ, ನನ್ನ ಬಳಿ ಕೇವಲ 8 ಲಕ್ಷ ರೂ. ಹಣ ಮಾತ್ರವೇ ಇದೆ ಎಂದಿದ್ದೆ. ಉಳಿದ ಹಣಕ್ಕೆ ಸಹಾಯ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು. 5 ಲಕ್ಷ ರೂ. ಮುಂಗಡ ಹಣವನ್ನು ಬೇರೊಬ್ಬರಿಗೆ ಕೊಡಿಸಿದ್ದರು. ಒಂದು ವರ್ಷ ಕಳೆದರೂ ಸೈಟ್ ಕೊಡಿಸಲಿಲ್ಲ. ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದರೂ ಕೊಟ್ಟಿಲ್ಲ” ಎಂದು ದೂರಿದ್ದಾರೆ.
ಈ ಲೇಖನ ಓದಿದ್ದೀರಾ?: ಬ್ಯಾಂಕ್, ವಿಮಾ ಕಂಪನಿಗಳಲ್ಲಿ ಬಿದ್ದಿದೆ ಜನರ 78,000 ಕೋಟಿ ರೂ.; ಈ ಹಣ ಪಡೆಯುವುದು ಹೇಗೆ?
“ಹಣ ವಾಪಸ್ ಕೇಳಿದಾಗ, ‘ರೂಂಗೆ ಬಾ ಹಣ ಕೊಡಿಸುತ್ತೇನೆ. ನಿನಗೆ ಹಣ ಬೇಕು, ನನಗೆ ಮಜಾ ಬೇಕು’ ಎಂದು ಅಶ್ಲೀಲವಾಗಿ ಮಾತನಾಡಿದ್ದಾರೆ. ಫೋನ್ ಕರೆ, ಆಡಿಯೋ ಮೆಸೇಜ್ ಹಾಗೂ ವಿಡಿಯೋ ಕರೆಗಳ ಮೂಲಕ ನಿರಂತರವಾಗಿ ಕಿರುಕುಳ ನೀಡಿದ್ದಾರೆ. ಅವರ ಲೈಂಗಿಕ ಕಿರುಕುಳದ ಮಾತುಗಳನ್ನು ಆಡಿಯೋ ಮತ್ತು ವಿಡಿಯೋ ರೂಪದಲ್ಲಿ ಸೆರೆಹಿಡಿದ್ದಿದ್ದೇನೆ” ಎಂದು ಮಹಿಳೆ ದೂರಿನಲ್ಲಿ ವಿವರಿಸಿರುವುದಾಗಿ ವರದಿಯಾಗಿದೆ.
ಇನ್ನು, ಮಹಿಳೆ ಮತ್ತು ಆಕೆಯ ಕುಟುಂಬದ ವಿರುದ್ಧ ಆರೋಪಿ ಬ್ರಹ್ಮಾನಂದ ಸ್ವಾಮೀಜಿ ಪ್ರತಿದೂರು ದಾಖಲಿಸಿದ್ದಾರೆ. ಮಹಿಳೆ ಮತ್ತು ಕುಟುಂಬಸ್ಥರು ಹಣಕ್ಕಾಗಿ ತಮಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಹಣ ಕೊಡದಿದ್ದರೆ, ನನ್ನ ಫೋಟೊ, ಆಡಿಯೋ, ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.




